Select Your Language

Notifications

webdunia
webdunia
webdunia
webdunia

ವನ್ಯಜೀವಿಗಳ ನಾಗರಹೊಳೆ ಉದ್ಯಾನವನ

ವನ್ಯಜೀವಿಗಳ ನಾಗರಹೊಳೆ ಉದ್ಯಾನವನ
ಚೆನ್ನೈ , ಶನಿವಾರ, 22 ನವೆಂಬರ್ 2014 (14:18 IST)
ನಾಗರಹೊಳೆ ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನ. ಇದು ಕೊಡಗಿನ ವಿರಾಜಪೇಟೆಯಿಂದ 64ಕಿ.ಮೀ.ದೂರದಲ್ಲಿದೆ. ಸುಮಾರು 643ಕಿ.ಮೀ. ವಿಸ್ತೀರ್ಣವುಳ್ಳ ಈ ಅರಣ್ಯಪ್ರದೇಶ ಹುಣಸೂರು ಅರಣ್ಯ ವಿಭಾಗಕ್ಕೆ ಸೇರಿದೆ. ನಾಗರಹೊಳೆ ಎಂಬ ಸಣ್ಣ ನದಿಯಿಂದಾಗಿ ಈ ಪ್ರದೇಶಕ್ಕೆ ನಾಗರಹೊಳೆ ಎಂಬ ಹೆಸರು ಬಂದಿದೆ. 
 
ನಾಗರಹೊಳೆ ಅರಣ್ಯ ತುಂಬಾ ದಟ್ಟವಾಗಿದ್ದು, ಸದಾ ಹಸಿರಿನಿಂದ ಕೂಡಿರುತ್ತದೆ. ಇಲ್ಲಿ ವರ್ಷಪೂರ್ತಿ ನೀರಿರುವ ಅನೇಕ ಜಲಪಾತಗಳಿವೆ. ಈ ಅಭಯಾರಣ್ಯದಲ್ಲಿ ಆನೆ, ಕಡವೆ, ಕಾಡುಕೋಣ, ಚಿರತೆ, ಕಾಡುಬೆಕ್ಕು, ಬೊಗಳುವ ಜಿಂಕೆ, ಚುಕ್ಕೆ ಜಿಂಕೆ, ಹುಲಿ, ಕರಡಿ, ಕೆನ್ನಾಯಿ, ನರಿ ಮುಂತಾದ ಪ್ರಾಣಿಗಳು ಇಲ್ಲಿ ನಿರಾತಂಕವಾಗಿ ತಿರುಗಾಡುವುದನ್ನು ಕಾಣಬಹುದು.
 
ಪ್ರಾಣಿಗಳ ವೀಕ್ಷಣೆಗೆಂದೇ ನಾಗರಹೊಳೆಗೆ ದೇಶ-ವಿದೇಶಗಳಿಂದ ನೂರಾರು ಜನರು ಭೇಟಿ ನೀಡುತ್ತಾರೆ. ಅರಣ್ಯ ಇಲಾಖೆ ಪ್ರವಾಸಿಗರನ್ನು ಕಾಡಿನೊಳಗೆ ಕರೆದೊಯ್ದು ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಲು ಅನುಕೂಲ ಕಲ್ಪಿಸಿದೆ. ವಾಹನಗಳಲ್ಲಿ ಅಥವಾ ಆನೆಗಳ ಮೇಲೆ ಕುಳಿತು ಕಾಡಿನಲ್ಲಿ ಸಂಚರಿಸುತ್ತಾ ಅಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಹಿಂಡು-ಹಿಂಡಾಗಿ ತಿರುಗಾಡುವ ಕಾಡು ಪ್ರಾಣಿಗಳನ್ನು ಅವುಗಳ ಮೂಲ ನೆಲೆಯಲ್ಲೇ ನೋಡಿ ಆನಂದಿಸಬಹುದು. ಪ್ರಾಣಿಗಳನ್ನು ಹತ್ತಿರದಿಂದ ನೋಡಲು ಕಾಡಿನಲ್ಲಿ ವೀಕ್ಷಣಾಗೋಪುರಗಳನ್ನು ನಿರ್ಮಿಸಲಾಗಿದೆ.
 
ಬೆಳಿಗ್ಗೆ 6ರಿಂದ 10ಗಂಟೆ ಹಾಗೂ ಸಂಜೆ 5ರಿಂದ 6.30ಗಂಟೆ ಅವಧಿಯಲ್ಲಿ ಮಾತ್ರ ಪ್ರವಾಸಿಗರನ್ನು ಪ್ರಾಣಿ ವೀಕ್ಷಣೆಗೆ ವಿಶೇಷ ವಾಹನಗಳಲ್ಲಿ ಅರಣ್ಯದೊಳಗೆ ಕರೆದುಕೊಂಡು ಹೋಗಲಾಗುತ್ತದೆ. ಏಕೆಂದರೆ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಡಲು ಸಿಗುವುದು ಈ ವೇಳೆಯಲ್ಲಿ ಮಾತ್ರ.
 
ನಾಗರಹೊಳೆ ಉದ್ಯಾನವನದೊಳಗೆ  ಬೆಳಿಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಮಾತ್ರ ಪ್ರವಾಸಿ ವಾಹನಗಳಿಗೆ ಪ್ರವೇಶ. 
ಮಾರ್ಗ: ನಾಗರಹೊಳೆ ಮಡಿಕೇರಿಯಿಂದ 100ಕಿ.ಮೀ. ವಿರಾಜಪೇಟೆಯಿಂದ 64ಕಿ.ಮೀ. ಮತ್ತು ಮೈಸೂರಿನಿಂದ 94ಕಿ.ಮೀ.ದೂರದಲ್ಲಿದೆ. ಮಳೆಗಾಲ ಬಿಟ್ಟು ಬೇರೆಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ.
 
ಇಲ್ಲಿನ ಪ್ರವಾಸಿ ಮಂದಿರಗಳಲ್ಲಿ ಉಳಿದುಕೊಳ್ಳಲು ಬಯಸುವವರು ಅರಣ್ಯ ಇಲಾಖೆಯ ಕೋಣೆಗಳನ್ನು ಮುಂಚಿತವಾಗಿ ಕಾಯ್ದಿರಿಸುವುದು ಉತ್ತಮ.
 

Share this Story:

Follow Webdunia kannada