Select Your Language

Notifications

webdunia
webdunia
webdunia
webdunia

ಮಂಡ್ಯ ಟಿಕೆಟ್ ಗಾಗಿ ಮೋದಿ ಭೇಟಿಯಾದ ಸುಮಲತಾ

Modi Sumalatha

Krishnaveni K

ನವದೆಹಲಿ , ಶುಕ್ರವಾರ, 9 ಫೆಬ್ರವರಿ 2024 (16:09 IST)
Photo Courtesy: Twitter
ನವದೆಹಲಿ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಸುಮಲತಾ ಅಂಬರೀಶ್ ದೆಹಲಿಯಲ್ಲಿ ಲಾಭಿ ನಡೆಸುತ್ತಿದ್ದಾರೆ.

ದಿಲ್ಲಿಯಲ್ಲಿ ಬೀಡುಬಿಟ್ಟಿರುವ ಸುಮಲತಾ ರಾಷ್ಟ್ರೀಯ ಅಧ‍್ಯಕ್ಷ ಜೆ.ಪಿ.ನಡ್ಡಾ, ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದರು. ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಭೇಟಿ ಮಾಡಿದ ಬಳಿಕ ಸುಮಲತಾ ಫುಲ್ ಖುಷಿಯಾಗಿದ್ದಾರೆ.

ಮೋದಿ ಜೊತೆ ಸುಮಲತಾ ಮಾತುಕತೆ
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇದೀಗ ಮಂಡ್ಯ ಟಿಕೆಟ್ ಗೆ ಜೆಡಿಎಸ್ ಪಟ್ಟು ಹಿಡಿದಿದೆ. ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದೆ. ಆದರೆ ತಾನು ಸ್ಪರ್ಧಿಸಿದರೆ ಮಂಡ್ಯದಿಂದ ಮಾತ್ರ ಎಂದು ಬಿಜೆಪಿಯ ಸುಮಲತಾ ಅಂಬರೀಶ್ ಹಠ ಹಿಡಿದು ಕುಳಿತಿದ್ದಾರೆ. ಇದರಿಂದಾಗಿ ಮಂಡ್ಯ ಟಿಕೆಟ್ ಕಗ್ಗಂಟಾಗಿದೆ.

ಇದೇ ಕಾರಣಕ್ಕೆ ಸುಮಲತಾ ನೇರವಾಗಿ ಮೋದಿಯವರನ್ನೇ ಭೇಟಿಯಾಗಿ ಮಂಡ್ಯ ಟಿಕೆಟ್ ತಮಗೇ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಧಾನಿ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಒಟ್ಟಿಗೇ ಕೆಲಸ ಮಾಡುವುದನ್ನು ಮುಂದುವರಿಸೋಣ ಎಂದಿದ್ದಾರೆ. ಆ ಮೂಲಕ ಮತ್ತೆ ಸುಮಲತಾಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಮೋದಿ ಭೇಟಿ ಬಳಿಕ ಸುಮಲತಾ ತುಂಬಾ ಖುಷಿಯಾಗಿದ್ದಾರೆ.

ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ಮಂಡ್ಯ ಕ್ಷೇತ್ರದ ವಿಚಾರವಾಗಿ ನನಗೆ ಚರ್ಚಿಸಲು ಅವಕಾಶ ಕೊಟ್ಟಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ತಮ್ಮ ಸಮರ್ಥ ನಾಯಕತ್ವದಿಂದ ನಮ್ಮ ದೇಶವನ್ನು ಇತರೆ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಳಿಸಲು ಪ್ರಯತ್ನ ನಡೆಸುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸೋಣ ಎಂಬ ನಿಮ್ಮ ಮಾತು ನನಗೆ ಸ್ಪೂರ್ತಿದಾಯಕವಾಗಿದೆ. ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ವಹಿಸಿ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಕ್ಕೆ ಧನ್ಯವಾದಗಳು’ ಎಂದು ಸುಮಲತಾ ಸುದೀರ್ಘವಾದ ಸಂದೇಶ ಬರೆದು ಧನ್ಯವಾದ ಸಲ್ಲಿಸಿದ್ದಾರೆ.

ಈ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿ ಮಂಡ್ಯ ಟಿಕೆಟ್ ಭದ್ರಪಡಿಸಿಕೊಂಡಿದ್ದಾರೆ. ಆದರೆ ಜೆಡಿಎಸ್ ನ್ನು ಈ ವಿಚಾರದಲ್ಲಿ ಒಪ್ಪಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಮಂಡ್ಯ ಟಿಕೆಟ್ ಇನ್ನೂ ಕಗ್ಗಂಟಾಗಿಯೇ ಇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮೂವರಿಗೆ ಭಾರತ ರತ್ನ ಪ್ರಧಾನ: ಆ ಸಾಧಕರು ಯಾರೆಲ್ಲಾ?