Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನಡೆ ದೇಶದ ಭದ್ರತೆಗೆ ಅಪಾಯ: ಆರ್.ಅಶೋಕ್

R Ashok

Krishnaveni K

ಬೆಂಗಳೂರು , ಶನಿವಾರ, 13 ಏಪ್ರಿಲ್ 2024 (13:21 IST)
ಬೆಂಗಳೂರು: ಕಾಂಗ್ರೆಸ್ಸಿನ ನಡೆಯು ಈ ದೇಶದ ಭದ್ರತೆಗೆ ಅಪಾಯ ತರುವಂತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.
 
 ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ. ರಿಜಾಯ್ಸ್‍ನಲ್ಲಿ ಇಂದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಆರೋಪ ಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ಘಟನೆ ಬೆಂಗಳೂರನ್ನು ತಲ್ಲಣಗೊಳಿಸಿದೆ. ಇಡೀ ದೇಶದ ಜನರು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪದೇಪದೇ ಇಂಥ ಭಯೋತ್ಪಾದಕ ಕೃತ್ಯ ನಡೆಯುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.
 
ಎನ್‍ಐಎ ತನಿಖಾ ತಂಡವು ಹಲವರನ್ನು ಬಂಧಿಸಿ ಮುಂದೆ ಆಗಬಹುದಾದ ಹಲವಾರು ಸ್ಫೋಟದ ಘಟನೆಗಳನ್ನು ತಡೆಯುವಲ್ಲಿ ಮಹತ್ವದ ಸಾಧನೆ ಮಾಡಿದೆ. ಭಯದಿಂದಿದ್ದ ಕರ್ನಾಟಕದ ಜನರು ಈ ಬಂಧನದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕರ್ನಾಟಕದ ಜನರ ಪರವಾಗಿ ಎನ್‍ಐಎ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
 
ಈ ದುರ್ಘಟನೆ ನಡೆದಾಗ ಸ್ಥಳಕ್ಕೆ ಹೋಗಿದ್ದ ಡಿ.ಕೆ.ಶಿವಕುಮಾರ್ ಅವರು ಘಟನೆಯನ್ನು ತಿರುಚುವ ಪ್ರಯತ್ನ ಮಾಡಿದ್ದರು. ಅವರಿಗೆ ಅಲ್ಪಸಂಖ್ಯಾತರ ಮೇಲೆ ಏನಾದರೂ ಹೇಳಿದರೆ ಮತಬ್ಯಾಂಕ್ ಖಾಲಿ ಆದೀತೆಂಬ ಮನಸ್ಥಿತಿ ಇದೆ. ಘಟನೆಯ ಕುರಿತು ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ‘ಇದು ವ್ಯವಹಾರ ಸಂಬಂಧಿತ ಗಲಾಟೆ; ಸಣ್ಣ ಪ್ರಮಾಣದ ಸ್ಫೋಟ’ ಎಂದಿದ್ದರು. ಪೊಲೀಸರೂ ಅದೇ ಜಾಡಿನಲ್ಲಿ ತನಿಖೆ ನಡೆಸಿದ್ದರು ಎಂದು ವಿಶ್ಲೇಷಿಸಿದರು.
 
ಬಳಿಕ ಸಾಯಿ ಪ್ರಸಾದ್ ಅವರಿಂದ ಮಾಹಿತಿ ಸಂಗ್ರಹಿಸಿದ್ದರು. ಬಿಜೆಪಿಯವರನ್ನೂ ತನಿಖೆಗೆ ಕರೆದಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಕ್ಷಣವೇ ಆರೋಪ ಮಾಡಿದ್ದರು. ಮಂತ್ರಿಗಳಾಗಿ ಅವರಿಗೆ ಕಾಮನ್ ಸೆನ್ಸ್ ಬೇಡವೇ ಎಂದು ಪ್ರಶ್ನೆ ಮುಂದಿಟ್ಟರು. ತನಿಖೆಗೆ ಕರೆದ ಕಾರಣದಿಂದ ಮುಖ್ಯ ತಿರುವು ಸಿಕ್ಕಿದೆ. ಪಕ್ಕಾ ಸಾಕ್ಷಿಯೂ ಲಭಿಸಿದೆ ಎಂದು ತಿಳಿಸಿದರು. ದೇಶದ ಬಗ್ಗೆ ಕಾಳಜಿ ಇದ್ದರೆ ಸಾಕ್ಷಿಯ ವಿವರವನ್ನು ತಿಳಿಸಬಾರದಿತ್ತು ಎಂದು ಆಕ್ಷೇಪ ಸೂಚಿಸಿದರು.
 
ಸಹೋದರಿಯ ಸೇಫ್ ಜಾಗ...
ಕಾಂಗ್ರೆಸ್ಸಿನವರು ಪದೇಪದೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಕುಕ್ಕರ್ ಬ್ಲಾಸ್ಟ್ ಆದಾಗಲೂ ಬ್ರದರ್ಸ್ ಎಂದಿದ್ದರು. ಎನ್‍ಐಎ ತನಿಖೆಯ ಮೂಲಕ ಇದರ ಹಿಂದೆ ಇದ್ದವರ ವಿವರ, ಸಂಚಿನ ಮಾಹಿತಿ ಲಭಿಸಿದೆ. ಇಲ್ಲಿನ ಬ್ರದರ್ಸ್ ಇವರ ಆತ್ಮೀಯ ಸಹೋದರಿ ಮಮತಾ ಬ್ಯಾನರ್ಜಿ ಅವರ ಸೇಫ್ ಜಾಗದಲ್ಲಿ ಸಿಕ್ಕಿದ್ದಾರೆ. ಆರೋಪಿಗಳು ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶಕ್ಕೆ ಹೋಗಿಲ್ಲ ಎಂದು ಆರ್.ಅಶೋಕ್ ಅವರು ವಿವರಿಸಿದರು.
 
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರನ್ನು ಬಂಧಿಸಲು ಒಂದು ವಾರ ಬೇಕಾಯಿತು. ನಾವು ಸದನದಲ್ಲಿ ಎರಡು ದಿನ ಹೋರಾಟ ಮಾಡಿದಾಗ, ‘ಅವರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ’ ಎಂದು ಸಚಿವರು ಹೇಳಿದ್ದರು. ಬಿಜೆಪಿಯವರದು ಕಾಮಾಲೆ ಕಣ್ಣು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈಗ ಹೇಳಿ ಯಾರದ್ರೀ ಕಾಮಾಲೆ ಕಣ್ಣು? ಎಂದು ಪ್ರಿಯಾಂಕ್ ಖರ್ಗೆಯವರನ್ನು ಪ್ರಶ್ನಿಸಿದರು. ಇದೆಲ್ಲವನ್ನೂ ನೋಡಿದರೆ ಕರ್ನಾಟಕದ ಜನರು ಆತಂಕಪಡುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
 
ಕಾಂಗ್ರೆಸ್ ಪಕ್ಷದವರಿಗೆ ದೇಶದ ಕಾಳಜಿ ಇಲ್ಲ. ಕಾಂಗ್ರೆಸ್ ಸಂಸದ ಸುರೇಶ್ ಅವರೇ ದೇಶವನ್ನು ಒಡೆಯಲು ಹೇಳಿದ್ದಾರೆ ಎಂದು ಗಮನ ಸೆಳೆದರು. ನಮ್ಮ ತೆರಿಗೆ ನಮ್ಮ ಹಕ್ಕು- ಲೂಟಿ ಹೊಡೆಯಲು ಇವರಿಗೆ ಇನ್ನೊಂದು ದೇಶ ಬೇಕು ಎಂದು ಟೀಕಿಸಿದರು.
 
ಕಾಂಗ್ರೆಸ್ ಪಕ್ಷವೇ ರಿಯಲ್ ಹಿಟ್ಲರ್..
ಸನ್ಮಾನ್ಯ ನರೇಂದ್ರ ಮೋದಿಯವರನ್ನು ಹಿಟ್ಲರ್‍ಗೆ ಹೋಲಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ಆಪಾದನೆ ಮಾಡುವುದು ಅಪರಾಧ. ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದು ಆರ್.ಅಶೋಕ್ ಅವರು ತಿಳಿಸಿದರು.
ನರೇಂದ್ರ ಮೋದಿಯವರನ್ನು ಹಿಟ್ಲರ್ ಎನ್ನಲು ಕಾಂಗ್ರೆಸ್‍ಗೆ ಏನು ಅಧಿಕಾರ ಇದೆ? ಈ ದೇಶದಲ್ಲಿ ರಿಯಲ್ ಹಿಟ್ಲರ್ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಈ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಪತ್ರಕರ್ತರನ್ನು ಬಂಧಿಸಿ ಜೈಲಿಗೆ ಹಾಕಿ, ನ್ಯಾಯಾಧೀಶರನ್ನೂ ಬಂಧಿಸುವ ಪ್ರಯತ್ನ ಮಾಡಿ, ವಿರೋಧ ಪಕ್ಷದ ಎಲ್ಲ ನಾಯಕರನ್ನು ಜೈಲಿಗೆ ಅಟ್ಟಿದ್ದರು. ಶ್ರೀಮತಿ ಇಂದಿರಾ ಗಾಂಧಿಯವರು ಯಾವ ಕಾನೂನಿನಡಿ ಇದೆಲ್ಲ ತಂದರು ಎಂದು ಕೇಳಿದರು. ಕಾಂಗ್ರೆಸ್‍ನವರದು ದೇಶದ ವಿಭಜನೆ ಮಾಡಿದ ಬ್ರಿಟಿಷರ ಮನಸ್ಥಿತಿಯಂತಿದೆ. ಆ ಮನಸ್ಥಿತಿಯಿಂದ ಅವರು ಹೊರಗಡೆ ಬಂದಿಲ್ಲ ಎಂದು ಟೀಕಿಸಿದರು.
 
ಭಯೋತ್ಪಾದಕರು ಪಶ್ಚಿಮ ಬಂಗಾಲ, ಕರ್ನಾಟಕ, ತಮಿಳುನಾಡಿಗೆ ತೆರಳುತ್ತಾರೆ, ಮೋದಿಯವರ ಆಡಳಿತದಲ್ಲಿ ಭಯೋತ್ಪಾದನಾ ಕೃತ್ಯಗಳು ಶೇ 90ರಷ್ಟು ಕಡಿಮೆ ಆಗಿವೆ. ಹಿಂದೆ ಕಾಂಗ್ರೆಸ್ ಆಡಳಿತ ಇದ್ದಾಗ ದಿನಾ ಬಾಂಬ್ ಬ್ಲಾಸ್ಟ್ ಆಗುತ್ತಿತ್ತು. ದಿನವೂ ಎ.ಕೆ.47 ಗನ್‍ಗಳು ಗುಡುಗುತ್ತಿದ್ದವು. ಅದೆಲ್ಲವನ್ನೂ ಮೋದಿಜೀ ಅವರು ಬಂದ್ ಮಾಡಿದ್ದಾರೆ. ದೇಶದ ಭದ್ರತೆಯ ಕಾವಲುಗಾರ, ರಿಯಲ್ ಹೀರೊ ನರೇಂದ್ರ ಮೋದಿಯವರು. ಅವರನ್ನು ನೀವು ಡಿಕ್ಟೇಟರ್ ಎನ್ನುವುದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.
 
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯೂ ಒಂದು ಭಯೋತ್ಪಾದನಾ ಕೃತ್ಯವೇ ಆಗಿತ್ತು. ಇಡೀ ಬೆಂಗಳೂರು ನಡುಗಿ ಹೋಗಿತ್ತು. ಅದರಲ್ಲಿ ಮುಖ್ಯ ಆರೋಪಿ ಸಂಪತ್ ರಾಜ್ ಇವತ್ತು ನಿಗಮದ ಚಯರ್‍ಮ್ಯಾನ್ ಆಗಿದ್ದಾರೆ. ಅರೆಸ್ಟ್ ಆಗಿ ಜೈಲಿಗೆ ಹೋಗಿ ಬಂದವರು, ಜಾಮೀನಿನಲ್ಲಿ ಇರುವವರಿಗೆ ಬೋರ್ಡ್ ಚಯರ್‍ಮ್ಯಾನ್ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ, ಧ್ವಂಸ, ಪೊಲೀಸ್ ಠಾಣೆಗೆ ನುಗ್ಗಿದ್ದು, ರಸ್ತೆಗಳಲ್ಲಿ ದೊಂಬಿಯಿಂದ ಒಂದು ವಾರ ಬೆಂಗಳೂರೇ ನಡುಗಿಹೋಗಿತ್ತು. ಅಂಥವರಿಗೆ ಸರ್ಟಿಫಿಕೇಟ್, ಬೋರ್ಡ್ ಅಧ್ಯಕ್ಷಗಿರಿ ಎಂದು ದೂರಿದರು.

ಸಂವಿಧಾನದ ವಿಷಯದಲ್ಲಿ ಕಾಂಗ್ರೆಸ್ಸಿನವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ ಎಂದು ಪ್ರಧಾನಿಯವರೇ ಹೇಳಿದ್ದಾರೆ. 400 ಸೀಟು ಬಂದರೆ ಸಂವಿಧಾನಕ್ಕೆ ಬದಲಾವಣೆ ತರುವುದಾಗಿ ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. ಸಂವಿಧಾನ, ಬಾಬಾ ಸಾಹೇಬರಿಗೆ ಗೌರವ ಕೊಟ್ಟವರು ಬಿಜೆಪಿಯವರು. ಸಂವಿಧಾನಕ್ಕೆ ಅಗೌರವ ತೋರಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದವರು ಕಾಂಗ್ರೆಸ್ಸಿನವರು ಎಂದು ಟೀಕಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗಲ್ಲ ಎಂದ ಸಿಎಂ ಸಿದ್ದರಾಮಯ್ಯ