Select Your Language

Notifications

webdunia
webdunia
webdunia
webdunia

ರತ್ನಖಚಿತ ಸಿಂಹಾಸನ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ರತ್ನಖಚಿತ ಸಿಂಹಾಸನ ಸಾರ್ವಜನಿಕ ವೀಕ್ಷಣೆಗೆ ಮುಕ್ತ
ಮೈಸೂರು , ಮಂಗಳವಾರ, 26 ಸೆಪ್ಟಂಬರ್ 2017 (17:19 IST)
ಮೈಸೂರು: ಯದುವಂಶದ ಅರಸರಿಗೆ ಬಳುವಳಿಯಾಗಿ ಬಂದ ವಿಜಯನಗರ ಅರಸರ ಕಾಲದ ರತ್ನಖಚಿತ ಸಿಂಹಾಸನ ಅಂಬಾವಿಲಾಸ ಅರಮನೆಯಲ್ಲಿ 2 ವರ್ಷದ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿದೆ. ಒಡೆಯರ್ ಮನೆತನದ ಸುಪರ್ದಿಯಲ್ಲಿರುವ ವಜ್ರ ವೈಢೂರ್ಯಗಳಿಂದ ಕೂಡಿದ ಈ ಸಿಂಹಾಸನ ಕಳೆದ ವರ್ಷ ದಸರಾ ಸಮಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿಲ್ಲ. ಆದರೆ ಈ ಬಾರಿ ರಾಜವಂಶಸ್ಥರು ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ.

ಸೆ.30ರವರೆಗೆ ರತ್ನಖಚಿತ ಸಿಂಹಾಸನ ದರ್ಶನಕ್ಕೆ ಲಭಿಸಲಿದೆ. ಅಧಿಕಾರ, ಘನತೆ, ಗಾಂಭೀರ್ಯ, ಪ್ರತಿಷ್ಠೆಯ ಸಂಕೇತವಾದ ಸಿಂಹಾಸನವನ್ನು ಸೆ. 15ರಂದು ಜೋಡಣೆ ಮಾಡಿದ ನಂತರ ಬಿಳಿ ಬಟ್ಟೆ ಹೊದಿಸಿ ಮುಚ್ಚಿಡಲಾಗಿತ್ತು. ದಸರಾ ಪ್ರಾರಂಭದ ದಿನ ಅದಕ್ಕೆ ಅಕ್ಷಿ, ಛತ್ರಿ ಹಾಗೂ ಕಳಶ ಜೋಡಣೆ ಮಾಡಿ ಒಡೆಯರ್ ಅವರು ಖಾಸಗಿ ದರ್ಬಾರ್ ಗೆ ಸಿಂಹಾಸನಾರೋಹಣ ಮಾಡಿದ ನಂತರ ಇದನ್ನು ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

ಅರಮನೆ ಮತ್ತು ರಾಜ್ಯ ಸರ್ಕಾರದ ನಡುವಿನ ವಿವಾದದಿಂದ 2 ವರ್ಷದಿಂದ ಸಿಂಹಾಸನವನ್ನು ರಾಜಮನೆತನದವರು, ಪ್ರವಾಸಿಗರು ಹಾಗೂ ಸಾರ್ವಜನಿಕರು ವೀಕ್ಷಿಸಲು ಅವಕಾಶ ನೀಡಿರಲಿಲ್ಲ. ಈ ಮಧ್ಯೆ ಕಳೆದ ವರ್ಷ ಅರಮನೆ ಆಡಳಿತ ಮಂಡಳಿ ನಿರ್ದೇಶಕರಾಗಿದ್ದ ಬಿ.ಜಿ.ಇಂದ್ರಮ್ಮ ಸಿಂಹಾಸನದ ಮೇಲೆ ಹೊದಿಸಿದ್ದ ಬಿಳಿ ಬಟ್ಟೆಯನ್ನು ತೆಗೆಯಲು ಹೋಗಿ ವಿವಾದಕ್ಕೀಡಾಗಿದ್ದರು.

ಸೆ.24ರಿಂದಲೇ ಸಿಂಹಾಸನ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಪ್ರವಾಸಿಗರು ಆಕರ್ಷಿತರಾಗಿದ್ದಾರೆ. ಅರಮನೆ ವೀಕ್ಷಣೆಗೆ ಪವೇಶ ದರ 50 ರೂ.ಇದ್ದು, ಸಿಂಹಾಸನ ವೀಕ್ಷಣೆಗೆ ಪ್ರತ್ಯೇಕವಾಗಿ 50 ರೂ. ಟಿಕೆಟ್ ಖರೀದಿಸಬೇಕು. ಪತ್ಯೇಕ ಟಿಕೆಟ್ ಖರೀದಿಸಿದವರಿಗೆ ಬಲಗೈಗೆ ಕೆಂಪು ಪಟ್ಟಿ(ರೆಡ್‍ಬ್ಯಾಂಡ್) ಕಟ್ಟಲಾಗುತ್ತೆ. ಇದನ್ನು ತೋರಿಸಿದರೆ ಮಾತ್ರ ಭದತ್ರಾ ಸಿಬ್ಬಂದಿ ಒಳಗೆ ಬಿಡುತ್ತಾರೆ. 2ಸಾವಿರಕ್ಕೂ ಹೆಚ್ಚು ಮಂದಿ ಮೊದಲ ದಿನ ಸಿಂಹಾಸನ ವೀಕ್ಷಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಂತುರು ಮಳೆ ನಡುವೆಯೂ ಪೊಲೀಸ್ ಬ್ಯಾಂಡ್… ನಾದಕ್ಕೆ ತಲೆದೂಗಿದ ಯದುವೀರ್ ದಂಪತಿ