Select Your Language

Notifications

webdunia
webdunia
webdunia
webdunia

ಅಂಬರೀಶ್ ಹೇಗೆ ಬೆಳೆದು ಬಂದರು ಗೊತ್ತಾ?

ಅಂಬರೀಶ್ ಹೇಗೆ ಬೆಳೆದು ಬಂದರು ಗೊತ್ತಾ?
ಬೆಂಗಳೂರು , ಭಾನುವಾರ, 25 ನವೆಂಬರ್ 2018 (20:05 IST)
ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಮಳವಳ್ಳಿ ಹುಚ್ಚೇಗೌಡ ಅಮರನಾಥ್ (ಅಂಬರೀಶ್) ಅವರು ಜನಿಸಿದ್ದು 29 ಮೇ 1952 ಮಂಡ್ಯ ಜಿಲ್ಲೆಯ ದೊಡ್ದರೆಸಿಕೆರೆಯಲ್ಲಿ. ತಂದೆ ಹುಚ್ಚೇಗೌಡ ತಾಯಿ ಪದ್ಮಮ್ಮ. ಬಾಲ್ಯ ವಿದ್ಯಾಬ್ಯಾಸ ಮುಗಿಸಿದ್ದು ಮಂಡ್ಯದಲ್ಲಿ. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದುಕೊಂಡಿದ್ದರು. ಅಂಬರೀಶ್ ಅವರು 1991 ರಲ್ಲಿ ಕನ್ನಡದ ಖ್ಯಾತ ನಟಿ ಸುಮಲತಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದರು.

1972 ರಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅವರು ಖಳ ನಾಯಕನ ಪಾತ್ರ ನಿರ್ವಹಿಸಿದ್ದರು.

ಅಂತ, ಪಡುವಾರಳ್ಳಿ ಪಾಂಡವರು, ಮಸಣದ ಹೂವು, ಶುಭಮಂಗಳ, ರಂಗನಾಯಕಿ ಹೀಗೆ ಪ್ರಸಿದ್ದ ಕನ್ನಡ ಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಅಂಬರೀಷ್​, ಕನ್ನಡ ಚಿತ್ರ ರಂಗದ ರೆಬೆಲ್ ಸ್ಟಾರ್. ಮಂಡ್ಯದ ಗಂಡು, ಕಲಿಯುಗದ ಕರ್ಣ ಇವರಿಗಿರುವ ಬಿರುದುಗಳು.

ಕನ್ನಡ ಸಿನಿಮಾರಂಗದಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಸಾಧನೆ ಮಾಡಿರುವ ಅಂಬರೀಶ್ ಅವರಿಗೆ 2013 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಅಂಬರೀಶ್ ಅವರ ರಾಜಕೀಯ ಕ್ಷೇತ್ರ:

ಕನ್ನಡ ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ರೆಬೆಲ್ ಸ್ಟಾರ್ ಅಂಬರೀಶ್, ಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿದ್ದರು. ನಂತರ ಅವರು ರಾಜಕೀಯ ಜೀವನ ಕಂಡುಕೊಂಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಶಾಸಕ, ಸಂಸದ, ರಾಜ್ಯ, ಕೇಂದ್ರ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಢಾಳಾಗಿ ಹೊಂದಿರುವ ಅವರಿಗೆ ಅಸಂಖ್ಯ ಅಭಿಮಾನಿ ಬಳಗವಿದೆ. ಅಭಿಷೇಕ್​ ಅಂಬರೀಷ್​ ಅವರ ಏಕೈಕ ಪುತ್ರ.

1998-99: 12ನೇ ಲೋಕಸಭಾ ಸದಸ್ಯರು.
1999-04: 13ನೇ ಲೋಕಸಭಾ ಸದಸ್ಯರು.
2004-09: 14ನೇ ಲೋಕಸಭಾ ಸದಸ್ಯರು.
2006-08: ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು.
2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2012: ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು.
2013 ರ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ವಸತಿ ಸಚಿವರು.

 
ಅಂಬಿಗೆ ಲಭಿಸಿದ ಪ್ರಶಸ್ತಿಗಳು:

ಕರ್ನಾಟಕ ರಾಜ್ಯ ಪ್ರಶಸ್ತಿ – ಅತ್ಯುತ್ತಮ ನಟ – 1982.
‘ಕರ್ನಾಟಕ ರಾಜ್ಯ ಪ್ರಶಸ್ತಿ – ಅತ್ಯುತ್ತಮ ಸಹಾಯ ನಟ – ಮಸಣದ ಹೂವು(1985-86)
ಫಿಲ್ಮ್ ಫೇರ್ ಪ್ರಶಸ್ತಿ – ಅತ್ಯುತ್ತಮ ನಟ – ಒಲವಿನ ಉಡುಗೊರೆ.
ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ – 2005.
ಜೀವಮಾನ ಫಿಲ್ಮ್ ಫೇರ್ ಪ್ರಶಸ್ತಿ – 2009.
‘ನಂದಿ ಪ್ರಶಸ್ತಿ( ಆಂಧ್ರಸರ್ಕಾರ) – 2009.
ವಿಷ್ಣುವರ್ಧನ್ ಪ್ರಶಸ್ತಿ (ಕರ್ನಾಟಕ ಸರ್ಕಾರ) – 2011.
ಗೌರವ ಡಾಕ್ಟರೇಟ್ (ಕರ್ನಾಟಕ ವಿವಿ) – 2013.
 
 

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯಾ ರಾಮಮಂದಿರಕ್ಕಾಗಿ ಆಗ್ರಹ