Select Your Language

Notifications

webdunia
webdunia
webdunia
webdunia

ಗೋವು ಸೃಷ್ಟಿಯ ಮುಖ್ಯಾಂಗ : ರಾಘವೇಶ್ವರ ಶ್ರೀ

ಗೋವು ಸೃಷ್ಟಿಯ ಮುಖ್ಯಾಂಗ : ರಾಘವೇಶ್ವರ ಶ್ರೀ
ಬೆಂಗಳೂರು , ಮಂಗಳವಾರ, 2 ಆಗಸ್ಟ್ 2016 (11:30 IST)
ಮಾನವನ ಪ್ರಾಣ ಹೊರಟುಹೋದರೆ ಉಳಿದ ಅಂಗಾಂಗಗಳು ನಿಷ್ಕ್ರಿಯವಾಗುತ್ತವೆ. ಹಾಗೆಯೇ ಗೋವಿನ ಹತ್ಯೆ ಸರ್ವನಾಶಕ್ಕೆ ಕಾರಣವಾಗುತ್ತದೆ. ಗೋವು ಸೃಷ್ಟಿಯ ಅಂಗ, ಉತ್ತಮಾಂಗ ಮಾತ್ರವಲ್ಲ ಮುಖ್ಯಾಂಗ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿಶ್ಲೇಷಿಸಿದರು.
ಮರದಲ್ಲಿ ಕುಳಿತು ಕೊಡಲಿಯಿಂದ ಬುಡವನ್ನು ಕಡಿದು ಸಂಭವಿಸಬಹುದಾದ ಅನಾಹುತದಂತೆ ಗೋ ಹತ್ಯೆ ಮೂಲಕ ಮೂರ್ಖತನವನ್ನು ಪ್ರದರ್ಶಿಸಲಾಗುತ್ತಿದೆ. ಗೋಹತ್ಯೆ ಎಂದರೆ ಸ್ವ-ಹತ್ಯೆ. ಗೋ ಸೇವೆ ಎಂದರೆ ಒಂದರ್ಥದಲ್ಲಿ ವೇದ ಸೇವೆ. ವೇದಗಳಲ್ಲಿ ಗೋವಿನ ಮಹತ್ವದ ಬಗ್ಗೆ ಅಲ್ಲಲ್ಲಿ ಉಲ್ಲೇಖವಿದೆ. ಪ್ರಾಚೀನ ಕಾಲದಲ್ಲೇ ಗೋವಿನ ಮಹತ್ವವೇನಿತ್ತು ಎಂಬ ವಿಚಾರ ಇಂದಿಗೂ ಪ್ರಸ್ತುತವೇ ಆಗಿದೆ ಎಂದು ವಿವರಿಸಿದರು.
 
ಸಾಧನ ಮಠದ ಸ್ವಾಮಿ ಚಂದ್ರೇಶಾನಂದ ಜೀ ಆಶೀರ್ವಚನ ನೀಡಿ, ಗೋ ಚಾತುರ್ಮಾಸ್ಯದ ಮೂಲಕ ಗೋಲೋಕವನ್ನು ಸೃಷ್ಟಿಸಿದ ರಾಘವೇಶ್ವರ ಶ್ರೀಗಳು ವಿಶಿಷ್ಟವಾದ ಸಂದೇಶವನ್ನು ನೀಡಿದ್ದಾರೆ. ಗೋವು ಮನೆಯಲ್ಲಿ ರತ್ನವಿದ್ದಂತೆ. ಕಳೆದ ಮೂರು ದಶಕಗಳಿಂದ ಸರಕಾರ ಗೋಹತ್ಯೆ ನಿಷೇಧ ಮಾಡಬೇಕೆಂದು ಆಗ್ರಹಿಸಿದರೂ ಫಲಪ್ರದವಾಗಿಲ್ಲ. ಕಾಮದುಘಾ ಎಂಬ ಪದದಲ್ಲಿ ಪ್ರತಿಯೊಂದು ಅಕ್ಷರಕ್ಕೂ ಮಹತ್ವವಿದೆ. ಕರ್ತವ್ಯವನ್ನು ಮನಗಾಣಬೇಕಾಗಿದೆ. ಪೂರ್ವಜರು ಕಲ್ಪಿಸಿದ ವೇದವನ್ನು ಮರೆಯುತ್ತಿರುವುದು ಸರಿಯಲ್ಲ. ಮಹಾತ್ಮರನ್ನು ಗುರುತಿಸಿ, ಗೌರವಿಸಬೇಕಾಗಿದೆ. ದುಷ್ಟರನ್ನು ಎದುರಿಸುವ, ಸಂಕಷ್ಟವನ್ನು ನಿಗ್ರಹಿಸುವುದಕ್ಕೆ ಇಷ್ಟದೇವತೆಯನ್ನು ಸಂಪ್ರೀತಿಗೊಳಿಸಬೇಕು. ಅದೇ ರೀತಿ ಗೋವನ್ನು ಉಳಿಸುವ ಶಪಥ ಕೈಗೊಳ್ಳಬೇಕಾಗಿದೆ ಎಂದರು.
 
ವಿದ್ವಾನ್ ಸೂರ್ಯನಾರಾಯಣ ಭಟ್ಟ, ಹಿತ್ಲಳ್ಳಿ ಅವರು 'ಗೋಬ್ರಾಹ್ಮಣ ಹಿತಾಯ ಚ' ಎಂಬ ವಿಷಯದ ಕುರಿತು ಗೋಸಂದೇಶ ನೀಡಿ ಅಲ್ಪಸ್ವಲ್ಪ ಜ್ಞಾನದಿಂದ ಗೋವಿನ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದರು. ವೈದೀಕರಾಗಿದ್ದರೂ ಗೋಸೇವೆಯಲ್ಲಿ ತೊಡಗಿಕೊಂಡಿರುವ ವೇ. ಮೂ. ಲಕ್ಷ್ಮೀನಾರಾಯಣ ಭಟ್ಟ ಹಾಳದಕಟ್ಟಾಇವರಿಗೆ ಶ್ರೀಗಳು ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದರು. ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಸಾಮವೇದ ಮಂತ್ರ  ಧ್ವನಿಮುದ್ರಿಕೆಯನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು.
 
ಪ್ರಥಮ ಮುದ್ರೆಯುಂಗುರ ಪ್ರದಾನ :
 
ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್ ಘನಪಾಠಿಗಳಿಗೆ ಶ್ರೀಗಳು ಸುವರ್ಣಾಂಗುಲೀಯಕ, ಶ್ರುತಿ ಸಾಗರ ಬಿರುದು ಪ್ರದಾನ ಮಾಡಿದರು. ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಮ್ಮ ಗೋಚಾತುರ್ಮಾಸ್ಯದ ಶುಭ ಸಂದರ್ಭ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಸೋಮವಾರ ನಡೆದ ವೈದಿಕ ಸಮಾವೇಶದಲ್ಲಿ ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳಿಗೆ ಅವರು ಮಾಡಿದ ಶ್ರೇಷ್ಠ ಸಾಧನೆಗೆ ಮಠದ ಇತಿಹಾಸದಲ್ಲಿ ಪ್ರಥಮ ಬಆರಿಗೆ ಮುದ್ರೆಯುಂಗುರ ನೀಡುವ ಮೂಲಕ ಶ್ರುತಿ ಸಾಗರ ಬಿರುದು ಪ್ರದಾನ ಮಾಡಿದರು. 
 
ಇವರ ಪಾಂಡಿತ್ಯ, ವೇದಶ್ರದ್ಧೆ ನಿಸ್ವಾರ್ಥತೆ, ಗುರುಭಕ್ತಿ ಮುಂತಾದ ಗುಣಗಳನ್ನು ಗಮನಿಸಿ ಮಠವು ಇವರನ್ನು ಸುವರ್ಣಾಂಗುಲೀಯಕವನ್ನು ನೀಡಿ ಶ್ರುತಿಸಾಗರ ಎಂಬ ಬಿರುದು ನೀಡಿ ಗೌರವಿಸಿದೆ. 
 
ತೈತ್ತಿರೀಯ ಕೃಷ್ಣ ಯಜುರ್ವೇದದಲ್ಲಿ ರಾಷ್ಟ್ರ ಮಟ್ಟದ ವಿದ್ವಾಂಸರಾಗಿರುವ ಅವರು ಸಮಗ್ರ ಯಜುರ್ವೇದವನ್ನು ಸಂಪೂರ್ಣ ಕಂಠಸ್ಥ ಹೇಳುವ ದೇಶದ ಅಪರೂಪದ ವಿದ್ವಾಂಸರಲ್ಲೊಬ್ಬರು. ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರತಿನಿತ್ಯ ಪಾರಾಯಣ ಮಾಡಿರುವುದು ಅವರ ಹೆಗ್ಗಳಿಕೆಯಾಗಿದೆ. ಮೂಲತಃ ಕಾಸರಗೋಡು ಜಿಲ್ಲೆಯ ಪಳ್ಳತ್ತಡ್ಕ ನಿವಾಸಿಯಾದ ಅವರು ರಾಮಚಂದ್ರಾಪುರಮಠದ ಶಿಷ್ಯವರ್ಗಕ್ಕೆ ಸೇರಿದವರು. ಬಾಲ್ಯದಲ್ಲೇ ಕಾಂಚಿ ಶೃಂಗೇರಿಗಳಲ್ಲಿ ನಡೆದ ಘನ ಪರೀಕ್ಷೆಗಳಲ್ಲಿ ವೈಶಿಷ್ಟ್ಯಶ್ರೇಣಿಯೊಂದಿಗೆ ಉತ್ತೀರ್ಣರಾಗಿ ದೇಶದ ಅನೇಕ ವೇದ ಸಭೆಗಳ ಅಧ್ಯಕ್ಷತೆ ವಹಿಸಿರುತ್ತಾರೆ. ಸುಮಾರು 10ಕ್ಕೂ ಹೆಚ್ಚು ಜಟಾ- ಘನ ಪಾರಾಯಣಗಳನ್ನು ಕಂಠಪಾಠ ಮಾಡಿರುತ್ತಾರೆ. ದೇಶದ ಅನೇಕ ವೇದ ಪರೀಕ್ಷಾ ಕೇಂದ್ರಗಳ ಪರೀಕ್ಷಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಅವರು ಅನೇಕ ವಿದ್ಯಾರ್ಥಿಗಳಿಗೆ ಘನಾಂತ ತನಕ ಪಾಠ ಮಾಡಿ ಅಪಾರ ಶಿಷ್ಯವರ್ಗವನ್ನು ಹೊಂದಿದ್ದಾರೆ. ಮಾಣಿ ಪೆರಾಜೆ ರಾಮಚಂದ್ರಾಪುರ ಮಠದಲ್ಲಿ ಜಟಾ ಪಾರಾಯಣವನ್ನು ಆಯೋಜಿಸಿದ್ದಾರೆ. ದೇಶದ ಹಲವೆಡೆ ವೇದಪರೀಕ್ಷಕರಾಗಿ, ಮೈಸೂರು ದತ್ತಪೀಠದಲ್ಲಿ 22 ವರ್ಷಗಳಿಂದ ಪರೀಕ್ಷಾಧಿಕಾರಿಯಾಗಿ, ಮೈಸೂರು ದತ್ತಪೀಠದಿಂದ ೨೦೦೨ರಲ್ಲಿ ಆಸ್ಥಾನ ವಿದ್ವಾನ್ ಪದವಿ ಪಡೆದ ಅವರನ್ನು ದತ್ತಪೀಠ ಮತ್ತು ಕಾಂಚೀ ಮಠಗಳಿಂದ ಸ್ವರ್ಣಕಂಕಣ ನೀಡಿ ಗೌರವಿಸಲಾಗಿದೆ. ಅವರು 6 ಘನಪಾರಾಯಣ, 13 ಜಟಾಪಾರಾಯಣಗಳಲ್ಲಿ ಭಾಗಿಯಾಗಿದ್ದಾರೆ.
 
ಶ್ರೀಮಠದ ಪದಾಧಿಕಾರಿಗಳು, ಘನಪಾಠಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
ಇಂದಿನ ಕಾರ್ಯಕ್ರಮ (02.08.2016):
ಬೆಳಗ್ಗೆ 7.00 ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
 
ಅಪರಾಹ್ನ 3.30 :  
 
ಗೋಸಂದೇಶ : ಗೋಆಧಾರಿತ ತಾರಸಿ ಕೃಷಿ - ಸಂದೀಪ್ ಕೆ. ಆರ್. ಪುರಂ
ಲೋಕಾರ್ಪಣೆ :  ಸಾಧನಾಪಂಚಕ ಪ್ರವಚನಮಾಲಿಕೆ - ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು - ಸಂದೀಪ್ ಕೆ. ಆರ್. ಪುರಂ
ಸಂತ ಸಂದೇಶ : ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಉಡುಪಿ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: ೫.೦೦ : ಕಲಾರಾಮ - ಗಾಯನ : ತ್ಯಾಗರಾಜ ಶರ್ಮಾ - ಮೃದಂಗ : ವಿದ್ವಾನ್ ಅನಿರುದ್ಧ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಆಂಧ್ರ ಬಂದ್‌