Select Your Language

Notifications

webdunia
webdunia
webdunia
webdunia

ಗಣೇಶ ಹಬ್ಬ ಮಾಡುವ ಮೊದಲು ಈ ರೋಚಕ ಸತ್ಯ ತಿಳಿಯಿರಿ

ಗಣೇಶ ಹಬ್ಬ ಮಾಡುವ ಮೊದಲು ಈ ರೋಚಕ ಸತ್ಯ ತಿಳಿಯಿರಿ
ಬೆಂಗಳೂರು , ಬುಧವಾರ, 31 ಆಗಸ್ಟ್ 2022 (06:17 IST)
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಒಂದೊಂದು ಹಬ್ಬಗಳ ಹಿಂದೆಯೂ ಅದರದ್ದೇ ಆದ ಕಥೆಗಳಿವೆ.

ಈ ದಿನದಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಸಾಮಾನ್ಯವಾಗಿ ಚಂದ್ರನನ್ನು ಪ್ರತಿ ದಿನ ನಾವು ಗಮನಿಸುವುದಿಲ್ಲ. ಆದ್ರೆ ಭಾದ್ರಪದ ಶುಕ್ಲದ ಚೌತಿಯ ದಿನದಂದು ಮಾತ್ರ ನೋಡಬಾರದೆನಿಸಿದರೂ, ಆಕಸ್ಮಿಕವಾಗಿ ಚಂದ್ರನನ್ನು ನೋಡಿಯೇ ಬಿಡುತ್ತೇವೆ.

ಅಂದು ಚಂದ್ರನನ್ನು ನೋಡಿದವರಿಗೆ ಅಪವಾದ ಬರುತ್ತದೆ. ಆದ್ರೆ ಕೃಷ್ಣ ಪಕ್ಷದ ಚೌತಿಯ ಚಂದ್ರನನ್ನು ನೋಡಿದರೆ ಆ ಅಪವಾದ ದೂರವಾಗುತ್ತದೆ ಎಂಬ ನಂಬಿಕೆ ಇಂದಿಗೂ ಕೆಲವೆಡೆ ಚಾಲ್ತಿಯಲ್ಲಿದೆ.

ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂದಿರುಗುತ್ತಾನೆ.

ಗಣಪತಿ ತನ್ನ ವಾಹನವಾದ ಇಲಿಯ ಮೇಲೆ ಕುಳಿತುಕೊಂಡು ಚಂದ್ರಲೋಕಕ್ಕೆ ಬಂದನು. ಈ ವೇಳೆ ಚಂದ್ರನು ಗಣೇಶನನ್ನು ನೋಡುತ್ತಾನೆ. ಸರ್ವಾಂಗ ಸುಂದರನಾಗಿರುವ ಚಂದ್ರ, ಗಣಪತಿಯ ಆನೆ ಮುಖ, ಡೊಳ್ಳುಹೊಟ್ಟೆ ಮತ್ತು ವಾಹನ ಇಲಿಯನ್ನು ನೋಡಿ ಹಾಸ್ಯ ಮಾಡಿ ನಕ್ಕು ಬಿಡುತ್ತಾನೆ. ಇದನ್ನು ಕಂಡ ಗಣಪತಿಗೆ ಸಿಟ್ಟು ನೆತ್ತಿಗೇರುತ್ತೆ. 

ಅಲ್ಲದೇ `ಎಲೈ ಚಂದ್ರನೇ ನಿನಗೆ ನಿನ್ನ ಸೌಂದರ್ಯದ ಮದ ಹೆಚ್ಚಾಗಿದೆ. ಎಲ್ಲ ಲೋಕಗಳಲ್ಲೂ ಪೂಜಿಸುತ್ತಿರುವ ನನ್ನನ್ನು ನೀನು ಮಾತ್ರ ಹಾಸ್ಯ ಮಾಡಿ ನಗುತ್ತಿರುವೆಯಾ? ಮೂರ್ಖ.. ಇದೋ.. ನಿನ್ನ ಅಹಂಕಾರಕ್ಕೆ ತಕ್ಕ ಪ್ರತಿಫಲ ಅನುಭವಿಸು.. ನಿನ್ನ ಅಹಂಕಾರಕ್ಕೂ ಅಜ್ಞಾನಕ್ಕೂ ಕಾರಣವಾಗಿರುವ ನಿನ್ನ ಸೌಂದರ್ಯ ಕುಗ್ಗಿ ಹೋಗಲಿ. ಇನ್ನು ಮುಂದೆ ನನ್ನ ಹುಟ್ಟಿದ ದಿನವಾದ ಭಾದ್ರಪದ ಚೌತಿಯಂದು ನಿನ್ನನ್ನು ನೋಡುವವರು ಸುಳ್ಳು ಅಪವಾದಾಕ್ಕೆ ಗುರಿಯಾಗಲಿ’ ಅಂತ ಗಣಪತಿ ಚಂದ್ರನಿಗೆ ಶಾಪ ಹಾಕುತ್ತಾನೆ.

ಗಣಪತಿಯ ಶಾಪದಿಂದ ಚಂದ್ರನ ಅಹಂಕಾರವೆಲ್ಲ ಕೆಲವೇ ಕ್ಷಣಗಳಲ್ಲಿ ಇಳಿದು ಹೋಯಿತು. ತನ್ನ ತಪ್ಪಿನ ಅರಿವಾಗಿ ಪಶ್ಚತ್ತಾಪ ಪಡುತ್ತಾ ಗಣಪತಿ ಮುಂದೆ ಕೈ ಮುಗಿದು ಕ್ಷಮೆ ಕೇಳುತ್ತಾನೆ. `ಸ್ವಾಮಿ ನನ್ನ ಅಜ್ಞಾನವನ್ನು ಮನ್ನಿಸು. ನನಗೆ ಕೊಟ್ಟ ಶಾಪವನನ್ನು ವಾಪಸ್ ತೆಗೆದುಕೊ’ ಅಂತ ಗಣಪತಿ ಮುಂದೆ ಚಂದ್ರ ಅಂಗಲಾಚಿಕೊಳ್ಳುತ್ತಾನೆ. 

ಚಂದ್ರನ ಮೊರೆಗೆ ಗಣಪತಿ ಮನಸ್ಸು ಕರಗಿ ಶಾಂತನಾಗುತ್ತಾನೆ. ಹೀಗಾಗಿ ಚಂದ್ರನನ್ನು ಸಂತೈಸಿ `ನಿನಗೆ ನಿನ್ನ ತಪ್ಪಿನ ಅರಿವಾಗಿದೆ. ನಿನ್ನ ಅಹಂಕಾರ ಇಳಿಸುವುದೇ ನನಗೆ ಮುಖ್ಯವಾಗಿತ್ತು. ಆದ್ರೆ ಈವಾಗ ಏನ್ ಮಾಡಿದ್ರೂ ನನ್ನ ಶಾಪ ಯಾವತ್ತಿಗೂ ಸುಳ್ಳಾಗದು.

ಆದ್ರೆ ಚೌತಿಯಂದು ನಿನ್ನನ್ನು ನೋಡಿ ಅಪವಾದಕ್ಕೆ ಗುರಿಯಾದವರು ಇತರ ತಿಂಗಳುಗಳ ಕೃಷ್ಣಪಕ್ಷದ ಚತುರ್ಥಿಯಂದು ನಿನ್ನನ್ನು ನೋಡಿದ ನಂತರವೇ ಎಲ್ಲರೂ ಊಟಮಾಡಲಿ. ಸಂಕಷ್ಟ ಚತುರ್ಥಿಯಂದು ನಿನ್ನ ದರ್ಶನವಾಗದೆ ಯಾರೂ ಭೋಜನವನ್ನು ಸ್ವೀಕರಿಸುವುದಿಲ್ಲ’ ಅಂತ ಗಣಪತಿ ಹೇಳುತ್ತಾನೆ. ಗಣಪತಿಯ ಮಾತು ಕೇಳಿ ಚಂದ್ರ ಸಂತಸ ವ್ಯಕ್ತಪಡುತ್ತಾನೆ.

ಈ ಕಾರಣದಿಂದ ಚೌತಿಯಂದು ಚಂದ್ರನನ್ನು ನೋಡಬಾರದು ಅಂತ ಹಿರಿಯರು ಹೇಳುತ್ತಾರೆ. ಈ ನಂಬಿಕೆ ಇಂದಿಗೂ ಕೆಲವು ಕಡೆಗಳಲ್ಲಿ ಇದ್ದು, ರಾತ್ರಿಯಾಗುತ್ತಿದ್ದಂತೆಯೇ ಹೊರಗಡೆ ತೆರಳುವ ತಮ್ಮ ಮಕ್ಕಳಿಗೆ ಹಿರಿಯರು ತಪ್ಪಿಯೂ ಇಂದು ಆಕಾಶ ನೋಡಬೇಡ ಅಂತ ಹೇಳುತ್ತಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಹಬ್ಬ ಆಚರಣೆ ವಿಶೇಷತೆ ತಿಳಿಯಿರಿ