ದೆಹಲಿಯ ಮಂದಿರ ಮಾರ್ಗದಲ್ಲಿರುವ ವಾಲ್ಮೀಕಿ ಬಸ್ತಿ ಬಳಿ ಪೊರಕೆಯನ್ನು ಹಿಡಿದು ಕಸ ಗುಡಿಯುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹಾತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ರಾಷ್ಟ್ರಪಿತ ಮಹಾತ್ಮಾಗಾಂಧಿಯವರ 145 ಜನ್ಮದಿನದ ಶುಭ ಸಮಯದಲ್ಲಿ ಗಾಂಧಿ ಕನಸಾದ ನಿರ್ಮಲ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮೋದಿಯವರು ಈ ಅಭಿಯಮಾನಕ್ಕೆ ಚಾಲನೆ ನೀಡಿದ್ದಾರೆ. ಮಹಾತ್ಮಾಗಾಂಧಿ ಕೆಲ ಕಾಲ ವಾಲ್ಮೀಕಿ ಬಸ್ತಿಯಲ್ಲಿ ತಂಗಿದ್ದರು. ಬಾಪುಜಿ ಅವರ 150 ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ (2019) ರೊಳಗೆ ದೇಶವನ್ನು ಸ್ವಚ್ಛ, ಶುದ್ಧ ರಾಷ್ಟ್ರವನ್ನಾಗಿಸುವುದು ಮೋದಿಯವರ ಕನಸು.
ಮುಂಜಾನೆ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ ನಂತರ ಅವರು ನೇರವಾಗಿ ವಾಲ್ಮೀಕಿ ಬಸ್ತಿಗೆ ಬಂದರು. ಅಲ್ಲಿ ಕಸ ಗುಡಿಯುವ ಮೂಲಕ ನಿರ್ಮಲ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಅಭಿಯಾನದಲ್ಲಿ 31 ಲಕ್ಷಕ್ಕೂ ಅಧಿಕ ಕೇಂದ್ರ ಸರಕಾರಿ ನೌಕರರು ಪಾಲ್ಗೊಳ್ಳಲಿದ್ದಾರೆ. ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ರಾಜ್ಯ ಸರಕಾರಿ ನೌಕರರಿಗೂ ಮನವಿ ಮಾಡಿಕೊಳ್ಳಲಾಗಿದೆ.
ಮನೆಯ ಸುತ್ತಮುತ್ತಲಿನ ಪರಿಸರ, ಸರಕಾರಿ ಕಚೇರಿ, ಶಾಲೆ, ಆಸ್ಪತ್ರೆ, ರಸ್ತೆ, ಮಾರುಕಟ್ಟೆ, ಬಸ್ ಹಾಗೂ ರೈಲ್ವೆ ನಿಲ್ದಾಣ, ಉದ್ಯಾನ, ಸ್ಮಾರಕಗಳು... ಹೀಗೆ ಅನೇಕ ಸಾರ್ವಜನಿಕ ಸ್ವತ್ತುಗಳಲ್ಲಿ ಶುಚಿತ್ವ ಕಾಪಾಡುವುದು, ಮಲಿನಯುಕ್ತ ನದಿ, ಕೆರೆಯನ್ನು ಶುದ್ಧೀಕರಿಸುವುದು ಸೇರಿದಂತೆ ಅನೇಕ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಇಲಾಖೆಗಳಿಗೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ.