Select Your Language

Notifications

webdunia
webdunia
webdunia
webdunia

ಕೂದಲು ಉದುರುವಿಕೆಗೆ ಪ್ರಮುಖವಾಗಿ ಏನು ಕಾರಣ ಗೊತ್ತಾ? ಇಲ್ಲಿದೆ ಸುಲಭ ಪರಿಹಾರ

ಕೂದಲು ಉದುರುವಿಕೆಗೆ ಪ್ರಮುಖವಾಗಿ ಏನು ಕಾರಣ ಗೊತ್ತಾ? ಇಲ್ಲಿದೆ ಸುಲಭ ಪರಿಹಾರ
ಬೆಂಗಳೂರು , ಶನಿವಾರ, 2 ಡಿಸೆಂಬರ್ 2017 (21:48 IST)
ತಲೆಗೂದಲೆಂದರೆ ಸೌಂದರ್ಯದ ಪ್ರತೀಕ. ಹಾಗೆಂದು ಪ್ರತಿಯೊಬ್ಬರೂ ಪರಿಗಣಿಸಿರುವುದರಿಂದಲೇ ಕೂದಲು ಉದುರುವಿಕೆ ಎನ್ನುವುದು ಇಂದಿನ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದರ ಹಿಂದಿನ ಕಾರಣಗಳನ್ನು ಹುಡುಕುತ್ತಾ ಹೋದರೆ ಅಲ್ಲಿ ಸಿಗುವ ದೊಡ್ಡ ಮಿಕ ಮಾನಸಿಕ ಒತ್ತಡ.
ಕೂದಲು ಉದುರುವಿಕೆ ಸಮಸ್ಯೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರುವುದು ಇಂದಿನ ಯುವ ಜನತೆ ಮತ್ತು ಕೂದಲು ಉದುರುತ್ತಿರುವುದು ಕೂಡ ಯುವ ಜನತೆಯದ್ದೇ. ಪುರುಷರಿಗಿಂತ ಸ್ತ್ರೀಯರಲ್ಲಿ ಕೂದಲಿನ ಬಗ್ಗೆ ಅತಿಯಾದ ಕಾಳಜಿ ಹೆಚ್ಚಾದರೂ, ಈ ಸಮಸ್ಯೆಯಿಂದ ಹೆಚ್ಚೆಚ್ಚು ಬಾಧೆಗೊಳಗಾಗುತ್ತಿರುವುದು ಪುರುಷರು ಎಂಬುದು ವಾಸ್ತವ. ವಯಸ್ಸು ಇಪ್ಪತ್ತಾಗುತ್ತಿದ್ದಂತೆ ತಲೆಯಲ್ಲಿ ಸೂರ್ಯ-ಚಂದ್ರನ ಮಚ್ಚೆಗಳು ಕಾಣಿಸಿಕೊಳ್ಳುವುದು ಸಹಜವಾಗಿಯೇ ಆತಂಕಕ್ಕೂ ಕಾರಣವಾಗುತ್ತಿದೆ.
 
ಆದರೆ ಇದಕ್ಕೆ ಆತಂಕವೇ ಕಾರಣ ಎನ್ನುತ್ತಾರೆ ತಜ್ಞ ವೈದ್ಯರು. ಕೆಲವು ಸಂದರ್ಭಗಳಲ್ಲಿ ಕಾರಣವಿಲ್ಲದೆ ಕೂದಲುಗಳು ಉದುರಬಹುದು. ಇಲ್ಲಿ ಮಾನಸಿಕ ಒತ್ತಡ, ಹಾರ್ಮೋನುಗಳ ವ್ಯತ್ಯಾಸ, ಅನಾರೋಗ್ಯದ ಸಂದರ್ಭದಲ್ಲಿ ತೆಗೆದುಕೊಳ್ಳುವ ಔಷಧಿಗಳ ದುಷ್ಪರಿಣಾಮ ಮುಂತಾದ ಹತ್ತು ಹಲವು ಕಾರಣಗಳು ದಿನದಿಂದ ದಿನಕ್ಕೆ ಇದಕ್ಕೆ ಸೇರ್ಪಡೆಯಾಗುತ್ತಾ ಬಂದಿದೆ.
 
ವೈದ್ಯರ ಪ್ರಕಾರ ದೇಹಕ್ಕೆ ಅಗತ್ಯ ಪೋಷಕಾಂಶಗಳ ಕೊರತೆಯಾದಾಗಲೂ ಕೂದಲು ಉದುರುತ್ತದೆ. ಹಾಗಾಗಿ ಕೂದಲು ಕಾಂತಿಯುತವಾಗಿ ಕಾಣಿಸಿಕೊಳ್ಳಲು ಪೌಷ್ಠಿಕಾಂಶಯುಕ್ತ ಆಹಾರಗಳ ಸೇವನೆಯೂ ಅಗತ್ಯ. ದೈನಂದಿನ ಆಹಾರ ಕ್ರಮದಲ್ಲಿ ಹೆಚ್ಚೆಚ್ಚು ತರಕಾರಿ ಮತ್ತು ಹಣ್ಣು ಹಂಪಲುಗಳ ಬಳಕೆಯೂ ಹೆಚ್ಚು ಫಲಕಾರಿ.
 
ಕೆಲವರಲ್ಲಿ ನರಸಂಬಂಧೀ ದುರ್ಬಲತೆ ಇದ್ದಾಗ ಕೂದಲುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಅಲ್ಲದೆ ಹಾರ್ಮೋನ್‌ಗಳ ಏರುಪೇರಿನಿಂದಾಗಿಯೂ ಕೂದಲು ಬೇಗನೆ ಬೆಳ್ಳಗಾಗುವ ಲಕ್ಷ್ಮಣಗಳು ಕಂಡುಬರುತ್ತಿವೆ.
 
ಆದರೆ ಇನ್ನು ಕೆಲವರಿಗೆ ವಂಶಪಾರಂಪರ್ಯವಾಗಿ ಕೂದಲು ಉದುರುವಿಕೆ ವಯೋಮಾನಕ್ಕೆ ವಿರುದ್ಧವಾಗಿ ಆರಂಭವಾಗುತ್ತದೆ. ಫಂಗಸ್ ಸೋಂಕಿನಿಂದ ಉಂಟಾಗುವ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಒಬ್ಬರು ಉಪಯೋಗಿಸಿದ ಬಾಚಣಿಗೆಯನ್ನು ಇನ್ನೊಬ್ಬರು ಉಪಯೋಗಿಸದಿದ್ದರೆ ಒಳಿತು.
 
ದೀರ್ಘಕಾಲೀನ ಪೋಷಕಾಂಶಗಳ ಕೊರತೆಯಿಂದಾಗಿ ಕೂದಲುಗಳ ತಮ್ಮ ಆಯುಷ್ಯವನ್ನು ಕಳೆದುಕೊಳ್ಳುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದಕ್ಕೆ ಅಧಿಕ ಲವಣಯುಕ್ತ ಆಹಾರಗಳ ಸೇವನೆಯು ಕಾರಣವಾಗುತ್ತದೆ. 
 
ಸರಿಯಾದ ಆರೈಕೆಯಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಕೂದಲ ಉತ್ತಮ ಆರೋಗ್ಯಕ್ಕಾಗಿ ಕೊಬ್ಬರಿ ಎಣ್ಣೆ ಬಳಕೆ ಉತ್ತಮ. ಇದು ಸರಿಯಾದ ರಕ್ತ ಸಂಚಾರಕ್ಕೆ ಎಡೆ ಮಾಡಿಕೊಡುತ್ತದೆ. ಅದೇ ರೀತಿ ದಾಸವಾಳ ಗಿಡದ ಎಲೆಗಳನ್ನು ರುಬ್ಬಿ ಅದರಿಂದ ದೊರಕುವ ರಸವನ್ನು ತಲೆಗೆ ಲೇಪಿಸುವುದು ಉತ್ತಮ. ಆ ಮೂಲಕ ಶಾಂಪೂ ಬಳಕೆಯನ್ನು ತಪ್ಪಿಸಬಹುದಲ್ಲದೆ ಇದು ಕೂದಲನ್ನು ನಯವಾಗಿಸುತ್ತದೆ.
 
ಅಂದ ಹಾಗೆ ಕೂದಲಿಗೆ ಬಣ್ಣ ಹಚ್ಚುವುದು, ಬ್ಲೀಚ್ ಮಾಡುವುದರಿಂದ ಒಂದು ಹಂತದಲ್ಲಿ ಸುಂದರ, ಕಾಂತಿಯುತ ಕೂದಲನ್ನು ಕಾಣಬಹುದಾದರೂ, ನಂತರದ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುವ ಸಾಧ್ಯತೆಗಳೇ ಹೆಚ್ಚು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಪ್ಪವಿದ್ದೋರು, ಸ್ಲಿಮ್ ಆಗ್ಬೇಕೇ? ಇಲ್ಲಿದೆ ಆರು ಸೂತ್ರ!