ರಾಜ್ಯದ ಯಾವ ಮೂಲೆಯಲ್ಲಿಯೂ ಇಲ್ಲದ ಬಿಜೆಪಿ ಬಂಡಾಯ ಪುತ್ತೂರಿನಲ್ಲಿರುವುದು ಪಕ್ಷಕ್ಕೊಂದು ಕಪ್ಪುಚುಕ್ಕೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಇಂದು (ಬುಧವಾರ) ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನೇಕ ಬಿಜೆಪಿ ಮುಖಂಡರಿಗೆ ಸಮಸ್ಯೆಗಳಿದ್ದರೂ, ಯಾರೂ ಕೂಡ ಪಕ್ಷದ ವಿರುದ್ಧ ಬಂಡಾಯವೆದ್ದಿಲ್ಲ. ಆದರೆ ಪುತ್ತೂರಿನಲ್ಲಿ ಎದ್ದಿರುವ ಬಂಡಾಯಕ್ಕೆ ಕಾರ್ಯಕರ್ತರೇ ಮದ್ದು ಮಾಡಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭಯೋತ್ಪಾದನೆ ಹತ್ತಿಕ್ಕುವಲ್ಲಿ ವಿಫಲವಾಗಿರುವ ಕಾಂಗ್ರೆಸ್, ಭಯೋತ್ಪಾದಕರ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳದಿರುವುದು ವಿಷಾದನೀಯ. ಅಲ್ಲದೆ, ಜಿಲ್ಲೆಯಲ್ಲಿ ನಕ್ಸಲೈಟ್ ಸಮಸ್ಯೆ ಜಾಸ್ತಿಯಾಗುತ್ತಿದ್ದರೂ, ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಮತ್ತೆ ಸಾರಾಯಿಯನ್ನು ಜಾರಿಗೊಳಿಸುವ ಪ್ರಯತ್ನ ನಡೆಸಿದರೆ ಕಾಂಗ್ರೆಸ್ ಅವನತಿಯ ಹಾದಿಹಿಡಿಯುವುದು ನಿಶ್ಚಿತ ಎಂದು ತಿಳಿಸಿದ ಅವರು, ಈ ಬಗ್ಗೆ ಜನತೆ ಎಚ್ಚರವಾಗಬೇಕೆಂದು ತಿಳಿಸಿದರು.