Select Your Language

Notifications

webdunia
webdunia
webdunia
webdunia

ನೋಡ ಬನ್ನಿ ಮೈಸೂರು ದಸರಾ...

ನೋಡ ಬನ್ನಿ ಮೈಸೂರು ದಸರಾ...
WD
ಚಿತ್ರ ಮತ್ತು ಲೇಖನ- ಬಿ.ಎಂ.ಲವಕುಮಾರ
ದಸರಾ ಎಂದಾಕ್ಷಣ ವಿದ್ಯುತ್ ಅಲಂಕೃತ ಭವ್ಯ ಅರಮನೆ.... ಮಹಾರಾಜರ ಖಾಸಗಿ ದರ್ಬಾರ್.... ಚಿನ್ನದ ಅಂಬಾರಿ ಹೊತ್ತ ಗಜಪಡೆಯ ಗಾಂಭೀರ್ಯದ ನಡಿಗೆಯ ಜಂಬೂ ಸವಾರಿ.... ಪಂಜಿನ ಕವಾಯತು.... ಹೀಗೆ ಒಂದೇ ಎರಡೇ... ಗತಕಾಲದ ರಾಜವೈಭವ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ.

ಇತಿಹಾಸವೇ ಇದೆ
ಮೈಸೂರಿನ ದಸರಾ ಇತರೆಡೆಯಲ್ಲಿ ಆಚರಿಸುವ ದಸರಾಕ್ಕಿಂತ ವಿಭಿನ್ನ, ವಿಶಿಷ್ಟ ಹೀಗಾಗಿ ವಿಶ್ವವಿಖ್ಯಾತಿ ಗಳಿಸಿದೆ. ಹಾಗೆ ನೋಡಿದರೆ ಮೈಸೂರು ದಸರಾ ಆಚರಣೆ ಇಂದು ನಿನ್ನೆಯದಲ್ಲ. ಇದಕ್ಕೆ ಗತ ಇತಿಹಾಸವೇ ಇದೆ.

ದಸರಾ ಅರ್ಥಾತ್ ವಿಜಯದಶಮಿ - ಇದು ದುಷ್ಟಶಕ್ತಿಯನ್ನು ನಿಗ್ರಹಿಸಿ ವಿಜಯಪಡೆದ ಸಂಕೇತವೂ ಹೌದು. ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರಿಸಿಕೊಂಡು ಬಂದರು ಎಂದು ಇತಿಹಾಸ ಹೇಳುತ್ತದೆ.

ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ರಾಜ ಒಡೆಯರ್ 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದ್ದಲ್ಲದೆ, ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರಿಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವ ಪಡೆಯುವುದರೊಂದಿಗೆ ವಿಶ್ವವಿಖ್ಯಾತ ಪಡೆದಿದ್ದು ಇತಿಹಾಸ.

ವೈಶಿಷ್ಟ್ಯವಿದು ಆಚರಣ
ಮೈಸೂರು ದಸರಾ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯಗಳು ಇರುವುದನ್ನು ನಾವು ಕಾಣಬಹುದು. ನವರಾತ್ರಿ ಆರಂಭದ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆದರೆ, ಆ ನಂತರ ವಿಜಯದಶಮಿಯಂದು ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿದು ಬಿಡುತ್ತದೆ.

ಮನರಂಜನಾ ಕಲೆಗಳ ಉತ್ಸ
ಆದರೆ ಈ ಹತ್ತು ದಿನಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮಗಳಿವೆಯಲ್ಲ, ಅವು ದಸರಾಕ್ಕೆ ಮೆರುಗು ನೀಡುತ್ತವೆ.
ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರತಿದಿನವೂ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ಹೀಗೆ ವಿವಿಧ ಕಾರ್ಯಕ್ರಮಗಳು ನಡೆದರೆ, ದಸರಾ ಪ್ರಯುಕ್ತ ಕೆಲವು ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತವೆ.

ಮುಂದಿನ ಪುಟದಲ್ಲಿ- ರಾಜ ದರ್ಬಾರ್

webdunia
WD
ರಾಜ ದರ್ಬಾರ
ಇದೆಲ್ಲದರ ನಡುವೆ, ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ದಸರಾ ಖಾಸಗಿ ದರ್ಬಾರ್ ಗತದಿನಗಳ ರಾಜವೈಭವವನ್ನು ಮತ್ತೆ ನಮ್ಮ ಕಣ್ಮುಂದೆ ತೆರೆದಿಡುತ್ತದೆ. ನವರಾತ್ರಿಗೆ ಮೊದಲೇ ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗುತ್ತದೆ. ಇದು ಎಲ್ಲರಿಂದ ಸಾಧ್ಯವಿಲ್ಲ. ಇದಕ್ಕಾಗಿ ತಲೆತಲಾಂತರದಿಂದ ಮೈಸೂರಿಗೆ ಸಮೀಪದ ಗೆಜ್ಜಗಳ್ಳಿ ಗ್ರಾಮದಿಂದ ಆಯ್ದ ಕೆಲವರನ್ನು ಕರೆತರಲಾಗುತ್ತದೆ. ಅವರೇ ಸಿಂಹಾಸನವನ್ನು ಜೋಡಿಸುತ್ತಾರೆ.

ನವರಾತ್ರಿ ಸಂದರ್ಭ ಅರಮನೆಯ ಸಂಪ್ರದಾಯದಂತೆ ಪೂಜಾಕಾರ್ಯವನ್ನು ನೆರವೇರಿಸಿ ಒಡೆಯರ್ ಮನೆತನದ ರಾಜರಾದ ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಿಂಹಾಸನವನ್ನು ಅಲಂಕರಿಸುತ್ತಾರೆ.

ಈ ಸಂದರ್ಭ ಫಳಫಳನೆ ಹೊಳೆಯುವ ರೇಷ್ಮೆ ವಸ್ತ್ರಕ್ಕೆ ಚಿನ್ನದ ಜರಿ ಕೂರಿಸಿದ ರಾಜಪೋಷಾಕು, ಅಲ್ಲದೆ ಜರಿಪೇಟ, ಅತ್ಯಮೂಲ್ಯ ಆಭರಣ ಧರಿಸಿದ ಒಡೆಯರ್ ದರ್ಬಾರ್ ಹಾಲ್‌ಗೆ ಬರುತ್ತಿದ್ದಂತೆಯೇ ಇಂದ್ರನ ಐಭೋಗವನ್ನು ನೆನಪಿಸುವಂತೆ ಮಾಡುತ್ತದೆ.

ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದ ದಿನ ಶ್ರೀಕಂಠದತ್ತ ಒಡೆಯರ್ ಅವರಿಗೆ ಬೆಳಿಗ್ಗೆ ಎದ್ದ ತಕ್ಷಣ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳ ಸ್ನಾನ ಮಾಡಲಾಗುತ್ತದೆ. ಮುತ್ತೈದೆಯರು ಹಾಗೂ ಪುರೋಹಿತ ಮನೆತನದ ಮಹಿಳೆಯರು ಒಡೆಯರ್‌ಗೆ ಆರತಿ ಬೆಳಗುತ್ತಾರೆ. ಇದಾದ ನಂತರ ಒಡೆಯರ್ ಪೂಜೆಗೆ ಅಣಿಯಾಗುತ್ತಾರೆ.

webdunia
WD
ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ನಂತರ ಕಳಶಪೂಜೆ, ಕಂಕಣಪೂಜೆ ನಡೆಸಿ, ಕುಲದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಒಡೆಯರ್ ಜೊತೆಗೆ ಅವರ ಶ್ರೀಮತಿ ಪ್ರಮೋದಾದೇವಿ ಸಹ ರಾಜಮನೆತನದ ಪದ್ಧತಿಯಂತೆ ಕಂಕಣ ಧರಿಸುತ್ತಾರೆ. ಇಲ್ಲಿಂದಲೇ ಎಲ್ಲಾ ರೀತಿಯ ಕಠಿಣ ವ್ರತಗಳು ಪ್ರಾರಂಭವಾಗುತ್ತವೆ.

ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಹಲವು ಪೂಜಾವಿಧಿಗಳು ಸಾಂಗೋಪವಾಗಿ ನಡೆಯುತ್ತವೆಯಲ್ಲದೆ, ದೇವಿ ಭಾಗವತವನ್ನು ಪಾರಾಯಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಮಹಿಷಾಸುರನನ್ನು ಸಂಹರಿಸಲಾಗುತ್ತದೆ.

ಬೆಳಿಗ್ಗೆ ಕಂಕಣಧಾರಿಗಳಾದ ಒಡೆಯರ್ ದಂಪತಿಗಳಿಗೆ ಪೂಜೆ ಮಾಡಲಾಗುತ್ತದೆ. ಜೊತೆಗೆ ದರ್ಬಾರ್‌ಗೆ ಬರುವ ಮುನ್ನ ಪತ್ನಿ ಪ್ರಮೋದಾದೇವಿಯವರು ಸುಮಂಗಲೆಯರೊಂದಿಗೆ ಒಡೆಯರ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ. ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ದಿನನಿತ್ಯ ನಡೆಯುತ್ತದೆ.

ದರ್ಬಾರ್ ಹಾಲ್‌ಗೆ ಆಗಮಿಸುವ ಒಡೆಯರ್, ಸಿಂಹಾಸನಕ್ಕೆ ಪೂಜೆ ಮಾಡಿ ಬಳಿಕ ರಾಜಗಾಂಭೀರ್ಯದಿಂದ ಸಿಂಹಾಸನವನ್ನೇರಿ ಆ ಸ್ಥಾನಕ್ಕೆ ಬಲಗೈಯಿಂದ ಸೆಲ್ಯೂಟ್ ಹೊಡೆದು ರಾಜಗತ್ತಿನಲ್ಲಿ ಆಸೀನರಾಗುತ್ತಾರೆ.

ಈ ಸಂದರ್ಭ ಹೊಗಳು ಭಟರಿಂದ ಬಹುಪರಾಕ್ ಕೇಳಿ ಬರುತ್ತದೆ. ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದಂದು ಬೆಳಿಗ್ಗೆಯಿಂದ ಖಾಸಗಿ ದರ್ಬಾರ್ ನಡೆದರೆ, ಉಳಿದಂತೆ ಸಂಜೆ ವೇಳೆಯಲ್ಲಿ ನಡೆಯುತ್ತದೆ.

ಪ್ರತಿ ದಿನ ಖಾಸಗಿ ದರ್ಬಾರ್ ನಡೆಯುವ ಮುನ್ನ ಕೆಲವು ವಿಧಿವಿಧಾನಗಳು ಕೂಡ ಇಲ್ಲಿ ನಡೆಯುತ್ತವೆ. ಅದರಂತೆ ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅರಮನೆಗೆ ಇವುಗಳ ಪ್ರವೇಶವಾಗುತ್ತದೆ. ನಂತರ ದರ್ಬಾರ್ ಆರಂಭವಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಖಾಸಗಿ ದರ್ಬಾರ್ ದಸರಾದ ಅತ್ಯಾಕರ್ಷಣೆಯಾಗಿರುತ್ತದೆ. ಈ ಸಂದರ್ಭ ಅರಮನೆ ಬಣ್ಣದ ಬೆಳಕಿನಿಂದ ಜಗಮಗಿಸುತ್ತಿರುತ್ತದೆ.

ಮುಂದಿನ ಪುಟದಲ್ಲಿ - ಜಂಬೂ ಸವಾರಿ

webdunia
WD
ಜಂಬೂ ಸವಾರಿ
ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ಮಾತ್ರ ಅತ್ಯದ್ಬುತ. ಇಂತಹಾ ಒಂದು ಭವ್ಯ ಮೆರವಣಿಗೆಯನ್ನು ನಾವು ಬೇರೆಲ್ಲೂ ಕಾಣಲಾರೆವು. ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯೇ ಚಿನ್ನದ ಅಂಬಾರಿ. ಮೊದಲು ಮಹಾರಾಜರು ಇದರಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಈಗ ಚಾಮುಂಡೇಶ್ವರಿಯ ವಿಗ್ರಹವನ್ನಿಟ್ಟು ಮೆರವಣಿಗೆ ನಡೆಯುತ್ತದೆ. ಈ ಅಂಬಾರಿಯ ಬಗ್ಗೆ ಹೇಳಬೇಕೆಂದರೆ ಇದರ ತೂಕ ಸುಮಾರು 750 ಕೆ.ಜಿ. ಈ ಸುಂದರ ಮಂಟಪಕ್ಕೆ ಕರಕುಶಲ ಕಲೆಗಾರರು ಚಿನ್ನದ ತಗಡನ್ನು ಹೊದಿಸಿದ್ದು ಇದರ ನಿರ್ಮಾಣಕ್ಕೆ ಬಳಕೆಯಾಗಿರುವ ಚಿನ್ನ ಸುಮಾರು 80 ಕೆ.ಜಿ.ಯಂತೆ.

ಅಂಬಾರಿ ಮೇಲೆ 5 ಕಳಶಗಳಿದ್ದು, ಅಂಬಾರಿಯಲ್ಲಿ ಎಲೆ, ಹೂ, ಬಳ್ಳಿಗಳ ಚಿತ್ತಾರಗಳನ್ನು ಮೈಸೂರು ಶೈಲಿಯಲ್ಲಿ ಕೆತ್ತಲಾಗಿದೆ. ದಸರಾ ದಿನದಂದು ನಿಗದಿತ ಮುಹೂರ್ತದಲ್ಲಿ ವಿಧಿ ವಿಧಾನದಂತೆ ಅಂಬಾರಿಯನ್ನು ಬಲರಾಮನಿಗೆ ಹೊರಿಸಲಾಗುತ್ತದೆ. ಇದರೊಂದಿಗೆ ಸಿಂಗಾರಗೊಂಡ ಇತರ 12 ಆನೆಗಳು ಹೆಜ್ಜೆ ಹಾಕುತ್ತವೆ.

ಈ ಸಂದರ್ಭ ನಡೆಯುವ ಜಂಬೂ ಸವಾರಿಯಲ್ಲಿ ರಕ್ಷಣಾ ಪಡೆಗಳ ಕವಾಯತ್, ವಿವಿಧ ಜಾನಪದ ಕಲಾ ತಂಡಗಳು, ವಿವಿಧ ಇಲಾಖೆಗಳಲ್ಲದೆ, ವಿವಿಧ ಜಿಲ್ಲೆಯ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮನಸೆಳೆಯುತ್ತವೆ.

ಅರಮನೆಯ ಆವರಣದಿಂದ ಆರಂಭವಾಗುವ ಜಂಬೂಸವಾರಿ ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಅಂದು ರಾತ್ರಿ ನಡೆಯುವ ಪಂಜಿನ ಮೆರವಣಿಗೆ, ಬೈಕ್ ರೇಸ್, ಬಾಣಬಿರುಸು ಪ್ರದರ್ಶನದೊಂದಿಗೆ ದಸರಾಕ್ಕೆ ವಿದಾಯ ಹೇಳಲಾಗುತ್ತದೆ.

ಅಂದಿಗೆ ದಸರಾದ ಆಚರಣೆಗಳು ಮುಗಿದು ಹೋಗಬಹುದು. ಆದರೆ ದಸರಾ ಸಂಭ್ರಮ ಮಾತ್ರ ಹಲವು ದಿನಗಳವರೆಗೆ ಮೈಸೂರಿನಲ್ಲಿ ಹಾಗೆಯೇ ಉಳಿಯುತ್ತದೆ. ದಸರಾದ ಸುಂದರ ಕ್ಷಣಗಳನ್ನು ಹತ್ತಿರದಿಂದ ಸವಿದ ಪ್ರೇಕ್ಷಕ ಅದೇ ಗುಂಗಿನಲ್ಲಿ ಮುಂದಿನ ದಸರಾಕ್ಕೆ ಕಾಯುತ್ತಾನೆ...

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada