Select Your Language

Notifications

webdunia
webdunia
webdunia
webdunia

ಯುಗ, ಯುಗಾದಿ ಕಳೆದರು...ಯುಗದ ಆದಿ ಈ ಯುಗಾದಿ

ಯುಗ, ಯುಗಾದಿ ಕಳೆದರು...ಯುಗದ ಆದಿ ಈ ಯುಗಾದಿ
PR
ಭಾರತೀಯ ಸನಾತನ ಪರಂಪರೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಅನಾದಿಕಾಲದಿಂದಲೂ ಪ್ರಾಮುಖ್ಯತೆ ಹೊಂದಿದೆ. ಸಂತಸ, ನೆಮ್ಮದಿಯ ಜೊತೆಗೆ ಸಡಗರ ತರುವ ಹಬ್ಬಗಳ ಆಚರಣೆ, ನಮ್ಮ ಬದುಕಿನ ಜೊತೆ ಅವಿನಾಭಾವ ಸಂಭಂದ ಹೊಂದಿದೆ. ಇಂತಹ ಹಬ್ಬಗಳಲ್ಲಿ ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹೊಸ ಸಂವತ್ಸರದ ಹಬ್ಬವೇ ಯುಗಾದಿ.

ಯುಗವೆಂದರೆ ಸೃಷ್ಟಿಯ ಕಾಲಮಾನ ಅಥವಾ ಹೊಸವರ್ಷ ಆದಿ ಎಂದರೆ ವರ್ಷದ ಪ್ರಾರಂಭ ದಿನ. ಅಂದರೆ ಹೊಸ ವರ್ಷದ ಪ್ರಾರಂಭ ದಿನವೇ ಯುಗಾದಿ. ನಮ್ಮಲ್ಲಿ ಯುಗಾದಿ ಹಬ್ಬವನ್ನು ಎರಡು ರೀತಿಯಿಂದ ಆಚರಿಸುವ ಪದ್ಧತಿಯಿದೆ. ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನು ಆಧರಿಸಿ, ಅಮಾವಾಸ್ಯೆ ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಎಂದು ಹೆಸರು ಬಂದಿದೆ. ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ನಿಗದಿತ ಸಮಯದಲ್ಲಿ ಬರುವುದಿಲ್ಲ. ಮೇಷರಾಶಿಗೆ ಸೂರ್ಯನು ಪ್ರವೇಶಿಸುವ ದಿವಸ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತಿದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸ ಬರುವುದಿಲ್ಲವಾದ್ದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಅಂದರೆ ಏಪ್ರಿಲ್-14ರಂದು ಸೌರಮಾನ ಯುಗಾದಿ ಬರುತ್ತದೆ.

ಈ ವರ್ಷ ಚಾಂದ್ರಮಾನ ಯುಗಾದಿಯು, ಚೈತ್ರ, ಮಾಸ ಶುಕ್ಲ ಪಕ್ಷ ಪ್ರತಿಪದೆ, ಮಾರ್ಚ್ 23ರಂದು ಶುಕ್ರವಾರ ಸೂರ್ಯೋದಯಕ್ಕೆ ನಂದನ ಸಂವತ್ಸರದೊಂದಿಗೆ ಪ್ರಾರಂಭವಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಂದ್ರಮಾನ ಹಾಗೂ ಸೂರ್ಯನ ಚಲನೆಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ.

ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ 00-ಭಾಗ (ಡಿಗ್ರಿ)ಯಲ್ಲಿ ಸೂರ್ಯ ಬಂದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ 14 ಅಥವಾ 15ನೇ ತಾರೀಖಿಗೆ ಬರುತ್ತಿರುತ್ತದೆ. ಆದರೆ ಚಂದ್ರನ ಚಲನೆ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಂದ್ರಮಾನ ಸಂವತ್ಸರವಾಗುತ್ತದೆ.

ಈ ಸೃಷ್ಟಿಯು ಜನಿಸಿ ಇಂದಿಗೆ 1,95,58,85113 ವರ್ಷಗಳು ಮುಗಿದಿದೆ. ಚತುರ್ದಶ ಮನುಗಳಲ್ಲಿ ಸ್ವಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ ಎಂಬ ಆರು ಮನ್ವಂತರಗಳು ಕಳೆದಿದ್ದು, ಏಳನೇ ವೈವಸ್ವತ ಮನ್ವಂತರಗಳಲ್ಲಿ, ಇಪ್ಪತ್ತೇಳು ಮಹಾ ಯುಗಗಳು ಕಳೆದು, ಇಪ್ಪತ್ತೆಂಟನೇ ಮಹಾಯುಗಗಳಲ್ಲಿ ಕೃತಯುಗ, ತ್ರೇತಾಯುಗ, ದ್ವಾಪರಾಯುಗ ಕಳೆದು ಕಲಿಯುಗ ಪ್ರಾರಂಭವಾಗಿದೆ. ಈ ಕಲಿಯುಗ 4,32,000 ವರ್ಷಗಳಲ್ಲಿ 5113 ವರ್ಷಗಳು ಕಳೆದು, 5114 ನೆಯ ವರ್ಷ ಆರಂಭವಾಗುತ್ತದೆ. ಶಾಲಿವಾಹನಶಕ 1934 ಕಳೆದು 1935 ಪ್ರಾರಂಭವಾಗುತ್ತದೆ. 60 ಸಂವತ್ಸರಗಳಲ್ಲಿ 26ನೇಯ ನಂದನ ಸಂವತ್ಸರದ ಪ್ರಾರಂಭ.

ಈ ಯುಗಾದಿಯಂದು ಶಾಲಿವಾಹನ ಶಕೆ 1934 ಮುಗಿಯುತ್ತದೆ. ಈ ಶಾಲಿವಾಹನ ಶಕೆ 1934 ಕ್ಕೆ 12 ಸಂಖ್ಯೆ ಕೂಡಿಸಿ, 60 ಸಂಖ್ಯೆಯಿಂದ ಭಾಗಿಸಿದಾಗ ಉಳಿಯುವ ಶೇಷವೇ 26. ಪ್ರಭವ ಸಂವತ್ಸರದಿಂಧ 26 ನೇ ಸಂವತ್ಸರವೇ ನಂದನ ಸಂವತ್ಸರ. ಇದೇ ರೀತಿ ಪ್ರತಿ ವರ್ಷದ ಸಂವತ್ಸರವನ್ನು ಕಂಡು ಹಿಡಿಯಬಹುದು. ಕ್ರೈಸ್ತ ವರ್ಷಕ್ಕೂ ಶಾಲಿವಾಹನ ಶಕೆ ವರ್ಷಕ್ಕೂ 78 ವರ್ಷಗಳ ವ್ಯತ್ಯಾಸವಿದೆ. ಶಾಲಿವಾಹನ ಶಕೆ ವರ್ಷಕ್ಕೆ 78 ವರ್ಷ ಕೂಡಿದರೆ ಕ್ರೈಸ್ತವರ್ಷ ಬರುತ್ತದೆ. (1934 + 78 = 2012)

ವರ್ಷದ ಮೂರೂವರೆ ಶುಭ ಮುಹೂರ್ತಗಳು, ಯುಗಾದಿ, ಅಕ್ಷಯ ತೃತೀಯ, ವಿಜಯದಶಮಿ ಮತ್ತು ಬಲಿಪಾಡ್ಯಮಿಯ ಅರ್ಧದಿವಸ, ಈ ಮೂರೂವರೆ ಶುಭ ಮುಹೂರ್ತಗಳಲ್ಲಿ ನಮಗೆ ಯುಗಾದಿಯೇ ವರ್ಷದ ಪ್ರಾರಂಭ ಅತ್ಯಂತ ಶುಭ ದಿವಸವಾಗಿದೆ. ಈ ದಿವಸ ಉತ್ಸವಗಳು ವರ್ಷದುದ್ದಕ್ಕೂ ಬಾಳಿನ ಬೆಂಬಲ, ಮುಂಬಲವಾಗಿ ಬರುತ್ತಿವೆ ಎಂದು ನಂಬಿಕೆ. ಕೆಲವರು ಈ ಶುಭ ಮುಹೂರ್ತದಲ್ಲಿ ಹೊಸ ಹೊಸ ಜೀವನೋಪಾಯಗಳನ್ನೂ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸುವರು. ಏಕೆಂದರೆ ಯುಗ ಯುಗಗಳಿಂದಲೂ ಅತ್ಯಂತ ಮಹತ್ವದ ಕಾರ್ಯಗಳು ಈ ಶುಭ ದಿವಸವೇ ನಡೆದುವೆಂದು ಶಾಸ್ತ್ರ ಪುರಾಣಗಳು ಹೇಳಿವೆ.

ಯುಗಾದಿಯು ಹಲವು ಪರಂಪರೆಗಳ ಪ್ರಾರಂಭ ದಿನ. ಬ್ರಹ್ಮನು ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೆಯಂದು, ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ, ಕಾಲಗಣನೆ ಆರಂಭಿಸಿದನೆಂದು ಪುರಾಣದಲ್ಲಿದೆ. ಶ್ರೀ ರಾಮನು, ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು, ಈ ಯುಗಾದಿ ದಿವಸವೇ. ವಿಷ್ಣು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ, ವಿಕ್ರಮಾದಿತ್ಯನನ್ನು ಜಯಸಿದ್ದರಿಂದ ಶಾಲಿವಾಹನ ಶಕೆ ಪ್ರಾರಂಭವಾಗಿದ್ದು, ಯುಗಾದಿ ದಿವಸವೆ. ವೇದವ್ಯಾಸರು ಕಲಿಯುಗ ಪ್ರಾರಂಭವಾಗಿದ್ದು ಯುಗಾದಿಯಂದೆ ಎಂದು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಯುಗಾದಿ ದಿನದಿಂದ ಹೊಸವರ್ಷ ಪ್ರಾರಂಭವಾಗುವುದರಿಂದ ಹಿಂದೂ ಪಂಚಾಂಗ ಮತ್ತು ಕ್ಯಾಲೆಂಡರ್ ಸಹಾ ಇಂದಿನಿಂದಲೇ ಪ್ರಾರಂಭವಾಗುತ್ತದೆ.

ಯುಗಾದಿ ದಿವಸ ಬೆಳಗಿನ ಜಾವ, ಬೇಗ ಎದ್ದು, ಮಂಗಳ ಸ್ನಾನ ಮಾಡಿ (ತೈಲಾಭ್ಯಂಗ) ಹೊಸ ಬಟ್ಟೆ ಧರಿಸಿಕೊಂಡು ಮನೆಯನ್ನೆಲ್ಲಾ ಮಾವು-ಬೇವು ಎಲೆಗಳಿಂದ ಶೃಂಗರಿಸಿ, ಹೊಸ ವರ್ಷವನ್ನು ಬರಮಾಡಿಕೊಂಡು, ವಿಶೇಷವಾಗಿ ವರ್ಷವೆಲ್ಲಾ ಹರ್ಷದಾಯಕವಾಗಲಿ, ಸಿಹಿಯೊಂದಿಗೆ ಕಹಿಯನ್ನು ಬರಮಾಡಿಕೊಂಡು, ಇದನ್ನು ಸಹಿಸುವ ಶಕ್ತಿ ಬರಲಿ ಎಂದು ಬೇವು-ಬೆಲ್ಲ ಸವಿಯಲಾಗುತ್ತದೆ. ಬೇವು-ಬೆಲ್ಲ ನಮ್ಮ ಜೀವನದುದ್ದಕ್ಕೂ ಕಾಣುವ ಸುಖ-ದುಃಖ, ಹಗಲು-ರಾತ್ರಿ, ನೋವು-ನಲಿವು, ಪ್ರೀತಿ-ದ್ವೇಷ, ಲಾಭ-ನಷ್ಟ ಇವುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಿ ವರ್ಷವೀಡೀ ಸಮರಸವಾಗಿರಲಿ ಎಂಬುದೇ ಇದರ ಐತಿಹ್ಯ. ಬೇವು-ಬೆಲ್ಲವನ್ನು ಸೇವಿಸುವಾಗ ಹೇಳುವ ಶ್ಲೋಕ ಹೀಗಿದೆ. ಶಿಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ ಸರ್ವಾರಿಷ್ಟ ವಿನಾಶಯ ನಿಂಬಕಂದಳ ಭಕ್ಷಣಂ|| ಅಂದರೆ ನೂರು ವರ್ಷಗಳ ಆಯುಷ್ಯ ಸದೃಢ ಆರೋಗ್ಯ ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ.

ಯುಗಾದಿಯಂದು ಜ್ಯೋತಿಷಿಗಳಿಂದ ಹೊಸವರ್ಷದ ಫಲಗಳನ್ನು ಕೇಳುವುದು ರೂಢಿಯಲ್ಲಿದೆ. ವರ್ಷದ ಫಲ ತಿಳಿದುಕೊಳ್ಳಬೇಕೆಂದು ಧರ್ಮಸಿಂಧವಿನಲ್ಲಿ ಪ್ರತಿಗೃಹಂ, ಧ್ವಜಾರೋಹಣಂ, ನಿಂಬಪತ್ರಾಶನಂ, ವತ್ಸರಾಧಿಫಲ ಶ್ರವಣಂ, ನವರಾತ್ರಾರಂಭಃ ತೈಲ ಅಭ್ಯುಂಗಾದಿಶ್ಚ ಶುದ್ಧಮಾಸ ಪ್ರತಿಪದೆ ಕಾರ್ಯಃ ಅಂದರೆ ಮನೆಯನ್ನೆಲ್ಲಾ ಮಾವು, ಬೇವು, ತಳಿರು-ತೋರಣಗಳಿಂದ ಅಲಂಕರಿಸಿ, ಧ್ವಜಾರೋಹಣ ಬೇವು-ಬೆಲ್ಲ ಸೇವಿಸುವುದು, ಪಂಚಾಂಗ ಶ್ರವಣದಲ್ಲಿ, ಯುಗಾದಿ ದಿವಸ ಸಂವತ್ಸರದ ಫಲವನ್ನು ಶ್ರವಣ ಮಾಡಬೇಕು.

ಸೂರ್ಯನಿಂದ ಆರೋಗ್ಯವನ್ನು ಚಂದ್ರನಿಂದ ಕೀರ್ತಿಯನ್ನು ಮಂಗಳನಿಂದ ಐಶ್ವರ್ಯ, ಬುಧನಿಂದ ಬುದ್ದಿ, ಗುರುವಿನಿಂದ ಗೌರವ, ಶುಕ್ರನಿಂದ ಶುಭವಾಣಿ, ಶನಿಯಿಂದ ಸಂತೋಷ, ರಾಹುವಿನಿಂದ ಶಕ್ತಿ, ಕೇತುವಿನಿಂದ ಕುಲೋನ್ನತಿ ಉಂಟಾಗುತ್ತದೆ. ವಾರದ ಶ್ರವಣದಿಂದ ದೀರ್ಘಾಯುಷ್ಯ ಉಂಟಾಗುತ್ತದೆ. ನಕ್ಷತ್ರ ಶ್ರವಣದಿಂದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಯೋಗ ಶ್ರವಣದಿಂದ ವಿಯೋಗನಾಶವಾಗುತ್ತದೆ. ಕರಣ ಶ್ರವಣದಿಂದ ಎಲ್ಲಾ ಇಷ್ಟಗಳು ಫಲಿಸುತ್ತವೆ. ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲ ಪುರುಷನ ಹಾಗೂ ವರ್ಷಾಧಿಪತಿಯ ಆರಾಧನೆ. ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ.

ಆರ್. ಸೀತಾರಾಮಯ್ಯ,
ಜ್ಯೋತೀಷ್ಕರು,
ಶಿವಮೊಗ್ಗ
9449048340

Share this Story:

Follow Webdunia kannada